ಮುಳಬಾಗಿಲು: ನಗರದಲ್ಲಿ ಜೂ. 7ರಂದು ಕೊಲೆಯಾಗಿದ್ದ ನಗರಸಭೆ ಸದಸ್ಯ ಜಗನ್ ಮೋಹನರೆಡ್ಡಿ ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಎಂಟು ವರ್ಷದ ಹಿಂದೆ ನಡೆದ ಕೊಲೆ ರಹಸ್ಯವೊಂದು ಬಯಲಿಗೆ ಬಂದಿದೆ. ಆಗ ಹೂತಿಟ್ಟಿದ್ದ ಶವ ಹೊರತೆಗೆಯಲು ಕೆರೆಯಂಗಳದ ನೀರು ಖಾಲಿ ಮಾಡಲಾಗುತ್ತಿದೆ.
ಜಗನ್ ಮೋಹನರೆಡ್ಡಿ ಕೊಲೆ ಅವರ ಮನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೊಲೆಯಲ್ಲಿ ಪ್ರಮುಖ ಆರೋಪಿಗಳಾದ ಜಗನ್ನಾಥ್, ಧನಂಜಯ, ಮಹೇಶ್, ಬಾಲಾಜಿ ಸಿಂಗ್ ಸೇರಿ 6 ಮಂದಿ ಹಾಗೂ ಕೊಲೆಗೆ ಸಹಕರಿಸಿದ 8 ಮಂದಿ ಸೇರಿ ಒಟ್ಟು 14 ಮಂದಿಯನ್ನು ಮುಳಬಾಗಿಲು ನಗರ ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಸಹಕಾರ ನೀಡಿದ ಅಶ್ವಿನಿ, ರೋಹಿತ್ ಕುಮಾರ್, ಪ್ರಕಾಶ್, ಸಂಗೀತಾ, ಜಯಲಕ್ಷ್ಮಿ, ನಾಗೇಶ್ ಸಾವಿತ್ರಮ್ಮ ಮತ್ತೊಬ್ಬ ಆರೋಪಿ ಪ್ರಸಾದ್ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಜಗಮೋಹನ ರೆಡ್ಡಿ ಕೊಲೆ ಕೇಸ್ ತನಿಖೆ ಸಮಯದಲ್ಲಿ 5 ವರ್ಷದ ಹಿಂದೆ ನಡೆದ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕೊಲೆ ಕೇಸಿನಲ್ಲಿ ಪೊಲೀಸರು ವಿಚಾರಣೆಯಲ್ಲಿ 2015ರ ಏಪ್ರಿಲ್ 1ರಂದು ಮುಳಬಾಗಿಲು ತಾಲೂಕಿನ ಲಿಂಗಾಪುರದ ರ್ನಿಜನ ಪ್ರದೇಶದ ಪೊದೆಯೊಂದರಲ್ಲಿ ಅಪರಿಚಿತ ಶವ ಸಿಕ್ಕಿತ್ತು. ಆ ಶವದ ಗುರುತು ಸಿಗದ ಹಿನ್ನೆಲೆಯಲ್ಲಿ ಡೀ ಕಂಪೋಸ್ ಆಗಿದೆ ಎಂದು ಗ್ರಾಮಾಂತರ ಪೊಲೀಸರು ನಾಗನಕುಂಟೆ ಬಳಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಬಳಿಕ ನಗರದ ಗಣೇಶಪಾಳ್ಯದ 31 ವರ್ಷದ ರಮೇಶ್ ಅಲಿಯಾಸ್ ಸೆಂಟರ್ ರಮೇಶ್ ಎಂದು ತಿಳಿದು ಬಂದಿತು. 2015 ಏಪ್ರಿಲ್ 28ರಂದು ಮುತ್ಯಾಲಪೇಟೆ ಗಂಗಮ್ಮನ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ವೇಳೆ ಮದ್ಯಪಾನ ಮಾಡಿದ್ದ ಪೇಂಟರ್ ರಮೇಶ್, ಡ್ಯಾನ್ಸ್ ಮಾಡುತ್ತಿದ್ದ ವೇಳೆ ಜಗಮೋಹನರೆಡ್ಡಿ ಹಾಗೂ ಪೇಂಟರ್ ರಮೇಶ್ಗೆ ಜಗಳವಾಗಿದೆ. ಅದೇ ಜಿದ್ದಿನಲ್ಲಿ ತನ್ನ ಬಲಗೈ ಬಂಟನೊಬ್ಬನಿಗೆ ಜಗಮೋಹನರೆಡ್ಡಿ 2 ಸಲ ಸುಪಾರಿ ನೀಡಿ ರಮೇಶ್ನನ್ನು ಕೊಲೆ ಮಾಡಿಸಿದ್ದ.
ಪೇಂಟರ್ ರಮೇಶ್ ಕೊಲೆ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ರಮೇಶ್ ಕುಟುಂಬದವರು ಸಾಕಷ್ಟು ಬಾರಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮಾಸ್ತಿ ಸರ್ಕಲ್ ಇನ್ಸ್ಪೆಕ್ಟರ್ ವಸಂತ್ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು ತನಿಖೆ ಕೈಗೊಳ್ಳುತ್ತಿದ್ದಾರೆ.