ಹುಬ್ಬಳ್ಳಿ: ಕೊಳಚೆ ಪ್ರದೇಶವೆಂಬ ಕಪ್ಪು ಚುಕ್ಕೆ ಕಳೆದುಕೊಳ್ಳುತ್ತಿರುವ ಹುಬ್ಬಳ್ಳಿ ಗೋಕುಲ ರಸ್ತೆಯ ಶ್ರೀ ರಾಮಲಿಂಗೇಶ್ವರ ನಗರ ಬಡಾವಣೆ ‘ಸ್ಮಾರ್ಟ್’ ಆಗುತ್ತಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ಸಿಟಿ ಲಿಮಿಟೆಡ್ ಎಂಬ ಹೆಸರಿನ ಸರ್ಕಾರಿ ಕಂಪನಿ ಈ ಪ್ರದೇಶದಲ್ಲಿ ಸ್ಮಾರ್ಟ್ ಸೌಲಭ್ಯ ಒದಗಿಸುವುದಕ್ಕಾಗಿ 31.14 ಕೋಟಿ ರೂ. ವೆಚ್ಚ ಮಾಡುತ್ತಿದೆ.
ಈ ಮೂಲಕ ಶ್ರೀ ರಾಮಲಿಂಗೇಶ್ವರ ನಗರ ಕೊಳಚೆ ಪ್ರದೇಶ ಹು-ಧಾ ಸ್ಮಾರ್ಟ್ಸಿಟಿ ಕಂಪನಿಯಿಂದ ಅಭಿವೃದ್ಧಿಗೊಂಡ ಮೊದಲ ಕೊಳಚೆ ಪ್ರದೇಶವಾಗಲಿದೆ.
ಲಾಕ್ಡೌನ್ನ 3-4 ತಿಂಗಳ ಅವಧಿ ಹೊರತುಪಡಿಸಿ ಕಳೆದ ಫೆಬ್ರವರಿಯಿಂದಲೇ ಈ ಬಡಾವಣೆಯಲ್ಲಿ ಅತ್ಯಾಧುನಿಕ ಸೌಲಭ್ಯ ನಿರ್ವಿುಸುವ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳುವ ಹಂತಕ್ಕೆ ತಲುಪಿವೆ.
2016ರಲ್ಲಿಯೇ ಸ್ಮಾರ್ಟ್ ಸಿಟಿ ಯೋಜನೆಗೆ ಹುಬ್ಬಳ್ಳಿ- ಧಾರವಾಡ ಆಯ್ಕೆಯಾಗಿದೆ. ಇದಾದ ಸುಮಾರು ವರ್ಷಗಳ ನಂತರ ಕೊಳಚೆ ಪ್ರದೇಶ ಅಭಿವೃದ್ಧಿಗೆ ಮೊದಲ ಪ್ರದೇಶವಾಗಿ ರಾಮಲಿಂಗೇಶ್ವರ ನಗರ ಆಯ್ಕೆಯಾಗಿದೆ. ‘ನಗರ ಬಡಜನರ ಪ್ರದೇಶಗಳಲ್ಲಿ ಮೂಲ ಸೌಕರ್ಯ ಒದಗಿಸುವ ಯೋಜನೆ’ ಎಂಬ ಹೆಸರಿನ ಅಡಿಯಲ್ಲಿ ಈ ಸ್ಲಂ ಆಯ್ದುಕೊಂಡಿದೆ ಹು-ಧಾ ಸ್ಮಾರ್ಟ್ಸಿಟಿ ಕಂಪನಿ. 2019ರ ಫೆಬ್ರವರಿಯಲ್ಲಿ ಬೆಂಗಳೂರು ಮೂಲದ ಮೆ. ಬಾಲಾಜಿ ಕೃಪಾ ಸಂಸ್ಥೆಗೆ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಗುತ್ತಿಗೆ ನೀಡಲಾಗಿದೆ.
ಗುತ್ತಿಗೆ ಪಡೆದಿರುವ ಸಂಸ್ಥೆಯೇ ಇಲ್ಲಿನ ಸೌಲಭ್ಯಗಳ ನಿರ್ವಹಣೆಯನ್ನು ಮುಂದಿನ 5 ವರ್ಷಗಳವರೆಗೆ ಮಾಡಲಿದೆ. ಒಂದು ವರ್ಷದಲ್ಲಿ ಸೌಲಭ್ಯಗಳು ಹಾಳಾದಲ್ಲಿ ಅವುಗಳನ್ನು ಮರಳಿ ನಿರ್ವಿುಸುವ ಹೊಣೆಗಾರಿಯೂ ಗುತ್ತಿಗೆ ಪಡೆದ ಸಂಸ್ಥೆಯದ್ದು ಎಂಬ ಷರತ್ತು ವಿಧಿಸಲಾಗಿದೆ.
ಹತ್ತು ಹಲವು ಕಾಮಗಾರಿ
3.46 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ, 12.16 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ವಿುಸಲಾಗುತ್ತಿದೆ. ಶ್ರೀ ರಾಮಲಿಂಗೇಶ್ವರ ನಗರದ ವಿವಿಧ ಕಾಲನಿಗಳಿಂದ ನಾಲಾಕ್ಕೆ ಸಂಪರ್ಕ ಕಲ್ಪಿಸುವವರೆಗೆ ಒಳಚರಂಡಿ ಪೈಪ್ಲೈನ್ ಜೋಡಿಸಲಾಗುತ್ತಿದೆ. 8.15 ಕೋಟಿ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಪೇವರ್ಸ್ ನಿರ್ವಿುಸಲಾಗಿದೆ. 1.96 ಕೋಟಿ ರೂ. ವೆಚ್ಚದಲ್ಲಿ ಈ ಮೊದಲಿದ್ದ ಸೌಲಭ್ಯಗಳಾದ ನೀರಿನ ಪೈಪ್ಲೈನ್, ವಿದ್ಯುತ್ ಕಂಬ ಮುಂತಾದವುಗಳನ್ನು ಅನಿವಾರ್ಯ ಸಂದರ್ಭದಲ್ಲಿ ಸ್ಥಳಾಂತರಗೊಳಿಸುವ ಕೆಲಸ ಮಾಡಲಾಗಿದೆ. 2.92 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಸೌಕರ್ಯ, 42 ಲಕ್ಷ ರೂ. ವೆಚ್ಚದಲ್ಲಿ ಇತರ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ.
ಸ್ಮಾರ್ಟ್ಸಿಟಿ ಯೋಜನೆಯಡಿ ಒಟ್ಟು 2 ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶ್ರೀ ರಾಮಲಿಂಗೇಶ್ವರ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಮತ್ತೊಂದು ಕೊಳಚೆ ಪ್ರದೇಶ ಕುಲಕರ್ಣಿ ಹಕ್ಕಲದಲ್ಲಿಯೂ 38 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.
| ಶಕೀಲ್ ಅಹ್ಮದ್, ವ್ಯವಸ್ಥಾಪಕ ನಿರ್ದೇಶಕರು, ಹು-ಧಾ ಸ್ಮಾರ್ಟ್ಸಿಟಿ ಕಂಪನಿ
ಸ್ಮಾರ್ಟ್ಸಿಟಿ ಯೋಜನೆಯಡಿ ಉತ್ತಮ ಸೌಲಭ್ಯ ಒದಗಿಸಲಾಗಿದೆ. ಆದರೆ, ಸ್ವಚ್ಛತೆಯ ಸಮಸ್ಯೆ ಬಹಳ ಇದೆ. ಗಟಾರು, ರಸ್ತೆ ಅಕ್ಕಪಕ್ಕದಲ್ಲಿ ಕಸ ಚೆಲ್ಲುತ್ತಾರೆ. ಸೌಲಭ್ಯ ಒದಗಿಸುವ ಜತೆಗೆ ಸ್ವಚ್ಛತೆ ಕಾಯ್ದುಕೊಳ್ಳುವ ಕೆಲಸವೂ ಆಗಬೇಕು. ನಾಗರಿಕರು ಸಹ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
| ಗಜಾನನ ಕಬಾಡೆ, ಶ್ರೀ ರಾಮಲಿಂಗೇಶ್ವರ ನಗರ ನಿವಾಸಿ