ಮುಂಡಗೋಡ: ಮರಮಟ್ಟು ಸಂಗ್ರಹಾಲಯ (ಕಟ್ಟಿಗೆ ಡಿಪೋ) ಸುತ್ತಲು ನಿರ್ಮಾಣಗೊಂಡಿರುವ ತಡೆಗೋಡೆ ಕಾಮಗಾರಿ ಮುಕ್ತಾಯವಾಗಿ ಒಂದೇ ವಾರದಲ್ಲಿ ಕುಸಿದು ಬೀಳುವ ಮೂಲಕ ಕಳಪೆ ಕಾಮಗಾರಿ ನಡೆದಿರುವುದು ಕಂಡು ಬಂದಿದೆ.
ಪಟ್ಟಣದ ಹೊರವಲಯದಲ್ಲಿ ನೂರಾರು ಎಕರೆ ವಿಶಾಲವಾದ ಪ್ರದೇಶದಲ್ಲಿ ಕಟ್ಟಿಗೆ ಡಿಪೋ ಇದೆ.
ಈ ಡಿಪೋಕ್ಕೆ ಮುಂಡಗೋಡ, ಯಲ್ಲಾಪುರ ತಾಲೂಕುಗಳ ವಿವಿಧ ಅರಣ್ಯ ಪ್ರದೇಶದಿಂದ ಕಟ್ಟಿಗೆ ಬರುತ್ತವೆ. ಅರಣ್ಯದಿಂದ ಬರುವ ಕಟ್ಟಿಗೆಯನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ.
ಈ ಕಟ್ಟಿಗೆ ಡಿಪೋದ ಸುತ್ತಲೂ ಹಲವಾರು ದಶಕಗಳಿಂದ ತಂತಿಯ ಬೇಲಿಯಿತ್ತು. ಅದೂ ಹಲವು ಕಡೆಗಳಲ್ಲಿ ಕಿತ್ತು ಹೋಗಿರುವ ಕಾರಣ ಸಿಮೆಂಟ್ ಕಂಬ ನಿಲ್ಲಿಸಿ ಅವುಗಳಿಗೆ ಸಿಮೆಂಟ್ ಪ್ಲೇಟ್ಗಳನ್ನು ಅಳವಡಿಸಿ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಮಂಜೂರಿಯಾಗಿತ್ತು.
ಒಂದು ಕಿಮೀಯಷ್ಟು ತಡೆಗೋಡೆ ನಿರ್ಮಿಸಲು 25 ಲಕ್ಷಕ್ಕೂ ಅಧಿಕ ಅನುದಾನ ಮಂಜೂರಿಯಾಗಿದೆ. ಮೂರು ತಿಂಗಳಿಂದ ತಡೆಗೋಡೆ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ.
ಕಳೆದ ವಾರ ತಡೆಗೋಡೆ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡು ಬಣ್ಣ ಬಳಿಯಲಾಗಿತ್ತು. ಆದರೆ, ಗುರುವಾರ ಸುರಿದ ಮಳೆಗೆ ಈ ತಡೆಗೋಡೆ ಎರಡು ಕಡೆಗಳಲ್ಲಿ ಕುಸಿದು ಬಿದ್ದಿದೆ.
ಕೆಲವು ಕಂಬಗಳು ಹಾಗೂ ಸಿಮೆಂಟ್ ಪ್ಲೇಟ್ಗಳು ನೆಲಕಚ್ಚಿವೆ. ಒಂದೇ ಮಳೆಗೆ ಈ ತಡೆಗೋಡೆ ಕುಸಿದು ಬಿದ್ದಿರುವುದು ನೋಡಿದರೆ ಮುಂದೆ ಸುರಿಯುವ ಮಳೆಗೆ ಸಂಪೂರ್ಣ ಕಾಂಪೌಂಡ್ ಕುಸಿದು ಬೀಳುವ ಸಾಧ್ಯತೆಗಳಿವೆ.
ಇದೂ ಸಂಪೂರ್ಣ ಕಳಪೆ ಕಾಮಗಾರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.
ಕಟ್ಟಿಗೆ ಡಿಪೋಕ್ಕೆ ನಿರ್ಮಾಣವಾಗಿರುವ ನೂತನ ಕಾಂಪೌಂಡ್ ಕುಸಿದು ಬಿದ್ದಿರುವುದನ್ನು ನೋಡಿದ್ದೇವೆ. ಈ ಬಗ್ಗೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ಮಾಡಿ ಕೊಡಲು ಸೂಚಿಸಲಾಗಿದೆ.
ಎಸ್.ಎಂ. ವಾಲಿ ಎಎಸಿಎಫ್