ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರ ಯೋಜನೆಯನ್ನು ಮಾತ್ರ ರೂಪಿಸಿತ್ತೇ ವಿನಾ ಯಾವುದೇ ಅನುದಾನ ಬಿಡುಗಡೆ ಮಾಡಿರಲಿಲ್ಲ. ಸಂಸದರು ಇಲ್ಲಿಗೆ ಬಂದು ಕೇವಲ ಪ್ರಚಾರ ಮಾಡಿ ಹೋಗುತ್ತಾರೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ನೂತನ ಅಧ್ಯಕ್ಷರೂ ಆದ ಶಾಸಕ ಗೋಪಾಲಕೃಷ್ಣ ಬೇಳೂರು ದೂರಿದರು.
ಜೋಗ ಜಲಪಾತದಲ್ಲಿ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಎಸ್ಎನ್ಸಿ ಕಂಪನಿಯ ಸಹಯೋಗದಲ್ಲಿ ಪ್ರವಾಸಿಗರಿಗಾಗಿ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ನಮ್ಮ ಸರ್ಕಾರ ಬಂದ ಮೇಲೆ ಹಣ ಬಿಡುಗಡೆಗೆ ಒತ್ತಾಯಿಸಿ ಕ್ರಮಗೊಳ್ಳಲಾಗಿದೆ. ಈಗಾಗಲೇ ಪ್ರಸ್ತಾವನೆ ಕಳಿಸಿ ಇದೀಗ 70 ಕೋಟಿ ರೂ. ಬಿಡುಗಡೆ ಆಗಿದೆ. ನಾನು ಹಾಗೂ ನಮ್ಮ ಸರ್ಕಾರ ಅಭಿವೃದ್ಧಿ ಪರವಾಗಿದ್ದು ತಾಲೂಕಿನ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಇದೀಗ ಹೊಸದಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸದ್ಯದಲ್ಲಿ ಜೋಗ ಜಲಪಾತಕ್ಕೆ ಸಚಿವರು ಆಗಮಿಸಲಿದ್ದಾರೆ. ಅವರ ಜತೆ ಚರ್ಚೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿನ ಹೃದಯ ಭಾಗದಲ್ಲಿರುವ ತುಂಗಾ ವಸತಿಗೃಹ ಹಾಗೂ ಕೆಪಿಸಿ ಒಡೆತನದ ಮೈಸೂರು ಬಂಗಲೆಯ ಕಟ್ಟಡವನ್ನು ಕೆಡವಲಾಗುವುದು ಎಂದು ತಿಳಿಸಿದರು.
ಜೋಗ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರಿಗೆ ಮೂಲ ಸೌಲಭ್ಯ ನೀಡುವುದು ಮೊದಲ ಆದ್ಯತೆ. ಆ ನಿಟ್ಟಿನಲ್ಲಿ ಪ್ರವಾಸಿಗರಿಗೆ ಅಗತ್ಯವಾಗಿ ಬೇಕಿದ್ದ ಸದಾ ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸಲಾಗಿದೆ. ಈಗಾಗಲೇ ಜೋಗ ಜಲಪಾತದಲ್ಲಿ ಸುಮಾರು 185 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಇದರ ಪ್ಯಾಕೇಜ್ನಲ್ಲಿಯೇ ಹೈಟೆಕ್ ಮಾದರಿಯಲ್ಲಿ ಸಾಕಷ್ಟು ಕುಡಿಯುವ ನೀರಿನ ಯುನಿಟ್ಗಳು ಇಲ್ಲಿ ನಿರ್ಮಾಣವಾಗಲಿದೆ. ಅಲ್ಲಿಯವರೆಗೂ ಪ್ರವಾಸಿಗರಿಗೆ ತೊಂದರೆ ಆಗದಿರುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ನೀರಿನ ಘಟಕವನ್ನು ಆರಂಭಿಸಲಾಗಿದೆ ಎಂದರು.
ಪಪಂ ಸದಸ್ಯ ಎಂ.ರಾಜು, ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಸಂತೋಷ್ಕುಮಾರ್, ಎಸ್ಎನ್ಸಿ ಮ್ಯಾನೇಜರ್ ಸಂದೀಪ್, ಜೆಎಂಎ ವ್ಯವಸ್ಥಾಪಕ ಶ್ರೀನಿವಾಸ್, ಕೆಎಸ್ಟಿಡಿಸಿ ವ್ಯವಸ್ಥಾಪಕ ಮನೋಜ್ ಕುಮಾರ್, ನಿವೃತ್ತ ಇಂಜಿನಿಯರ್ ಟಿ.ಪಿ.ರಮೇಶ್, ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಪ್ರಮುಖರಾದ ಎಸ್.ಎಲ್.ರಾಜ್ಕುಮಾರ್, ಎಚ್.ಎಸ್.ಸಾದಿಕ್, ಬಿ.ಉಮೇಶ್, ಶ್ರೀಧರ್ ಲಿಂಗನಮಕ್ಕಿ, ಶ್ರೀಲತಾ ಸತ್ಯನ್, ಸಣ್ಣಪ್ಪ, ವಿಜಯಕುಮಾರ್ ಇತರರಿದ್ದರು.