More

    ಯುವಕನ ಬ್ಯಾಗ್ ಕಸೀದಿದ್ದ ಆಟೋ ಚಾಲಕನ ಸೆರೆ

    ಬೆಂಗಳೂರು: ಪಾಲಕರು ಬುದ್ಧಿವಾದ ಹೇಳಿದ್ದಕ್ಕೆ ಬೇಸರ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದ ಯುವಕನ ಬಳಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ ಆಟೋ ಚಾಲಕನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಎಂ.ಎಸ್.ಪಾಳ್ಯದ ಸಿಂಗಾಪುರ ಲೇಔಟ್ ನಿವಾಸಿ ಸಾದಿಕ್ (೩೨) ಬಂಧಿತ ಆಟೋ ಚಾಲಕ. ಈತನಿಂದ ೬.೫೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಯು ದೊಡ್ಡನಕ್ಕುಂದಿ ನಿವಾಸಿ ಕಿಶನ್ ರೆಡ್ಡಿ(೨೦) ಎಂಬಾತನ ಬಳಿ ಏ.೨ರಂದು ಚಿನ್ನಾಭರಣವಿದ್ದ ಬ್ಯಾಗ್ ದರೋಡೆ ಮಾಡಿ ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ದೊಡ್ಡನಕ್ಕುಂದಿ ನಿವಾಸಿಯಾಗಿರುವ ಕಿಶನ್ ರೆಡ್ಡಿ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾನೆ. ಆತನಿಗೆ ಹಲವರು ಸ್ನೇಹಿತರು ಇದ್ದಾರೆ. ಹೀಗಾಗಿ ಸ್ನೇಹಿತರ ಜತೆಗೆ ಒಡನಾಟ ಕಡಿಮೆ ಮಾಡಿ ಓದಿನ ಕಡೆಗೆ ಗಮನ ಕೊಡುವಂತೆ ತಂದೆ ಹೇಳಿದ್ದಾರೆ. ಇದರಿಂದ ಬೇಸರ ಮಾಡಿಕೊಂಡ ಕಿಶನ್ ರೆಡ್ಡಿ ಏ.೨ರಂದು ಮುಂಜಾನೆ ಮನೆ ಬಿಟ್ಟು ತೆರಳಿದ್ದಾನೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಎಚ್‌ಎಎಲ್ ಠಾಣೆ ಪೊಲೀಸರು, ತನಿಖೆ ವೇಳೆ ಮೊಬೈಲ್ ಕರೆಗಳನ್ನು ಆಧರಿಸಿ ಕಿಶನ್ ರೆಡ್ಡಿ ಪುರಿ ಜಗನ್ನಾಥ ದೇವಸ್ಥಾನದ ಬಳಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕೂಡಲೇ ಒಂದು ತಂಡ ಪುರಿಗೆ ತೆರಳಿ ಏ.೬ರಂದು ಕಿಶನ್ ರೆಡ್ಡಿಯನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದು ಪಾಲಕರಿಗೆ ಒಪ್ಪಿಸಿದ್ದಾರೆ.

    ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಸೆರೆ:
    ಕಿಶನ್ ರೆಡ್ಡಿ ದಿನ ಧರಿಸುತ್ತಿದ್ದ ಚಿನ್ನದ ಚೈನ್, ಉಂಗುರ ಕಾಣಿಸದಿರುವ ಬಗ್ಗೆ ಚಿಕ್ಕಪ್ಪ ಪ್ರಶ್ನಿಸಿದ್ದಾರೆ. ಆಗ ಆಟೋ ಚಾಲಕ ಬ್ಯಾಗ್ ದರೋಡೆ ಮಾಡಿದ ಬಗ್ಗೆ ಕಿಶನ್ ರೆಡ್ಡಿ ಹೇಳಿದ್ದಾನೆ. ಸಂಬಂಧ ಏ.೧೩ರಂದು ಎಚ್‌ಎಎಲ್ ಠಾಣೆಗೆ ನೀಡಲಾದ ದೂರಿನ ಮೇರೆಗೆ ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಏ.೨ರಂದು ಮುಂಜಾನೆ ಆಟೋ ಸಂಚರಿಸಿದ ಸಮಯ, ಮಾರ್ಗದ ಆಧಾರದ ಮೇಲೆ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಆಟೋದ ನೋಂದಣಿ ಸಂಖ್ಯೆ ಪತ್ತೆ ಹಚ್ಚಿ ಬಳಿಕ ಆಟೋ ಚಾಲಕನನ್ನು ಬಂಧಿಸಿದ್ದಾರೆ.

    ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿ:
    ಬಸವನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ತೆರಳಲು ಕಿಶನ್ ರೆಡ್ಡಿ, ಆರೋಪಿ ಸಾದಿಲ್‌ನ ಆಟೋ ಹತ್ತಿದ್ದಾನೆ. ಬಳಿಕ ತಾನು ಧರಿಸಿದ್ದ ೯೧ ಗ್ರಾಂ ತೂಕದ ಚಿನ್ನದ ಸರ ಮತ್ತು ೯ ಗ್ರಾಂ ತೂಕದ ಉಂಗುರವನ್ನು ಬಿಚ್ಚಿ ಬ್ಯಾಗ್‌ಗೆ ಇರಿಸಿಕೊಂಡಿದ್ದಾನೆ. ಇದನ್ನು ಗಮನಿಸಿದ ಆಟೋ ಚಾಲಕ ಸಾದಿಲ್, ಮಾರ್ಗ ಮಧ್ಯೆ ರಮೇಶ್‌ನಗರದ ಮುಖ್ಯರಸ್ತೆಯಲ್ಲಿ ಮೂತ್ರ ವಿಸರ್ಜನಗೆ ಆಟೋ ನಿಲ್ಲಿಸಿದ್ದಾನೆ. ಈ ವೇಳೆ ಬ್ಯಾಗ್ ಹಿಡಿದುಕೊಂಡೇ ಕಿಶನ್ ರೆಡ್ಡಿ ಮೂತ್ರ ವಿಸರ್ಜನೆಗೆ ತೆರಳಿದ್ದಾನೆ. ಈ ವೇಳೆ ಸಾದಿಲ್ ಹಿಂದಿನಿಂದ ಆಟೋ ಚಲಾಯಿಸಿಕೊಂಡು ಬಂದು ಕಿಶನ್ ರೆಡ್ಡಿಯ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ. ನಂತರ ಕಿಶನ್ ರೆಡ್ಡಿ ಬೇರೆ ಆಟೋ ಹಿಡಿದು ಮೆಜೆಸ್ಟಿಕ್‌ಗೆ ತೆರಳಿ ಅಲ್ಲಿಂದ ರೈಲು ಹಿಡಿದು ಭುವನೇಶ್ವರದತ್ತ ಪ್ರಯಾಣ ಬೆಳೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts