More

    ವಿಧಾನಮಂಡಲ ಬಜೆಟ್​ ಅಧಿವೇಶನ ಆರಂಭ: ರಾಜ್ಯಪಾಲರ ಭಾಷಣದ ಪ್ರಮುಖಾಂಶಗಳು ಇಲ್ಲಿವೆ…

    ಬೆಂಗಳೂರು: ಪ್ರಸಕ್ತ ಹದಿನೈದನೇ ವಿಧಾನಸಭೆಯ ಕೊನೆಯ ಅಧಿವೇಶನ ಇಂದಿನಿಂದ (ಫೆ.10) ಪ್ರಾರಂಭವಾಗಿದ್ದು, ಜಂಟಿ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಗವರ್ನರ್​ ಥಾವರಚಂದ್​ ಗೆಹ್ಲೋಟ್, ರಾಜ್ಯ ಸರ್ಕಾರವನ್ನು ಮನಸಾರೆ ಹೊಗಳಿದರು.

    ಫೆ.17ರಂದು ಬಜೆಟ್​ ಮಂಡನೆಯಾಗಲಿದ್ದು, ಇಂದಿನಿಂದ ಬಜೆಟ್​ ಅಧಿವೇಶನ ಆರಂಭವಾಗಿದೆ. ಆದರೆ, ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿರುವುದರಿಂದ ರಾಜ್ಯಪಾಲರ ಭಾಷಣದ ವೇಳೆ ಜಂಟಿ ಸದನಸ ಸದಸ್ಯರ ಕೊರತೆ ಎದ್ದು ಕಾಣುತ್ತಿತ್ತು.

    ರಾಜ್ಯಪಾಲರ ಭಾಷಣದ ಪ್ರಮುಖಾಂಶಗಳು ಈ ಕೆಳಕಂಡಂತಿದೆ
    ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳೇ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರೇ, ಕರ್ನಾಟಕದ ಮುಖ್ಯಮಂತ್ರಿಯವರೇ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರೇ, ವಿಧಾನಸಭೆಯ ವಿರೋಧ ಪಕ್ಷದ ನಾಯಕರೇ, ಸಚಿವರೇ ಹಾಗೂ ಕರ್ನಾಟಕ ವಿಧಾನ ಮಂಡಲದ ಸದಸ್ಯರೇ, ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ತಮ್ಮೆಲ್ಲರನ್ನು ಹತ್ತೂರ್ವಕವಾಗಿ ಸ್ವಾಗತಿಸುತ್ತೇನೆ. ಇಂದು ತಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡುವುದು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ.

    ನನ್ನ ಸರ್ಕಾರವು ರೈತರು, ಕಾರ್ಮಿಕರು, ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ. ಜೊತೆಗೆ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯ ರಾಜ್ಯವಾಗಿ ದಾಪುಗಾಲಿಡುತ್ತಿದೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿಯ ಮಾದರಿಯನ್ನು ನನ್ನ ಸರ್ಕಾರ ಅನುಸರಿಸುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥವನ್ನು ಯಶಸ್ವಿಯಾಗಿ ಕ್ರಮಿಸುವ ವಿಶ್ವಾಸ ನನಗಿದೆ.

    ರೈತನು ಈ ದೇಶದ ಬೆನ್ನೆಲುಬು, ರೈತ ಮತ್ತು ಅವನ ಕುಟುಂಬವನ್ನು ಸದೃಢಗೊಳಿಸಲು ನನ್ನ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿಯನ್ನು ನೇಕಾರರು, ಕೃಷಿ ಕಾರ್ಮಿಕರು, ಮುಂತಾದ ವಿವಿಧ ವರ್ಗಗಳಿಗೂ ವಿಸ್ತರಿಸಲಾಗಿದೆ. ರೈತಶಕ್ತಿ ಯೋಜನೆಯಡಿ ಕೃಷಿ ಯಾಂತ್ರೀಕರಣ ಪ್ರೋತ್ಸಾಹಿಸಲು ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ ಐದು ಎಕರೆ ಡೀಸೆಲ್ ಸಹಾಯಧನ ನೀಡುತ್ತಿದ್ದು, ಇದಕ್ಕಾಗಿ 400 ಕೋಟಿ ರೂಪಾಯಿಗಳನ್ನು ಒದಗಿಸಿದ್ದು, 386.98 ಕೋಟಿ ರೂಪಾಯಿ, ಬಿಡುಗಡೆ ಮಾಡಿದೆ. ಇದರಿಂದ 53.22 ಲಕ್ಷ ರೈತರುಗಳಿಗೆ ನೇರ ನಗದು ವರ್ಗಾವಣೆ ಮೂಲಕ ಸಹಾಯ ಮಾಡಲಾಗಿದೆ. ಕೀಟ ರೋಗ, ಕಳೆಬಾಧೆ ಮತ್ತು ಮಣ್ಣಿನ ಪೋಷಕಾಂಶದ ಸಮರ್ಪಕ ನಿರ್ವಹಣೆಗಾಗಿ ಕೃಷಿ ಸಂಜೀವಿನಿ ಯೋಜನೆಯಡಿ 160 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ಲೋಕಾರ್ಪಣೆ ಮಾಡಿದ್ದು, 2022-23ನೇ ಸಾಲಿಗೆ 64 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯವನ್ನು ಅನುಷ್ಠಾನ ಮಾಡಲಾಗಿದೆ.

    ನನ್ನ ಸರ್ಕಾರವು ಅಮೃತ ಮಹೋತ್ಸವದ ಅಂಗವಾಗಿ AS 750 ಅಮೃತ ರೈತ / ಮೀನುಗಾರರ / ನೇಕಾರರ ಉತ್ಪಾದಕರ ಸಂಸ್ಥೆಗಳನ್ನು ರಚಿಸಿರುವುದಾಗಿ ಘೋಷಿಸಿದ್ದು, ಇಲ್ಲಿಯವರೆಗೆ 364 ಸಂಸ್ಥೆಗಳನ್ನು ನೊಂದಾಯಿಸಲಾಗಿದೆ. ಇದಕ್ಕಾಗಿ, 24.57 ಕೋಟಿ ರೂಪಾಯಿಗಳ ವೆಚ್ಚ ಮಾಡಲಾಗಿದೆ. ಪ್ರಸಕ್ತ ಸಾಲಿನಿಂದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ನೂತನವಾಗಿ ಕೃಷಿ ಕಾಲೇಜನ್ನು ಪ್ರಾರಂಭಿಸಲಾಗಿದೆ.

    ಪ್ರಸಕ್ತ ಸಾಲಿನಲ್ಲಿ 50,335 ರೈತರ ತಾಕುಗಳಲ್ಲಿ ಸುಮಾರು 27,910 ಸೆಕ್ಟೇರ್ ಪ್ರದೇಶದಲ್ಲಿ ಇಲಾಖೆಯ ವತಿಯಿಂದ ತೋಟಗಾರಿಕ ಬೆಳೆಗಳನ್ನು ವಿಸ್ತರಿಸಲಾಗಿದೆ. 6 ಲಕ್ಷ ಸಂಖ್ಯೆ ತೋಟಗಾರಿಕೆ ಬೆಳೆಗಳ ಸಸಿ/ಕಸಿಗಳನ್ನು ರೈತಾಪಿ ವರ್ಗಕ್ಕೆ ವಿತರಿಸಲಾಗಿದೆ ಮತ್ತು ಮಳೆ ನೀರನ್ನು ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು 484 ಸಂಖ್ಯೆಯ ಕೃಷಿ ಹೊಂಡ ಘಟಕಗಳನ್ನು ನಿರ್ಮಿಸಲಾಗಿದೆ. ಕರ್ನಾಟಕ ರಾಜವು ರೇಷ್ಮೆ ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿದೆ. 1.15 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪು ನೇರಳ ಬೇಸಾಯವಿದ್ದು, 1.38 ಲಕ್ಷ ರೈತ ಕುಟುಂಬಗಳು ರೇಷ್ಮೆ ಕೃಷಿಯಲ್ಲಿ ತೊಡಗಿದ್ದು, ವಾರ್ಷಿಕವಾಗಿ 11,191 ಮೆಟ್ರಿಕ್‌ನಷ್ಟು ಕಚ್ಚಾ ರೇಷ್ಮೆಯನ್ನು ಉತ್ಪಾದಿಸಲಾಗಿದ್ದು, ಅಂದಾಜು 14.91 ಲಕ್ಷ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. 104.19 ಕೋಟಿ ರೂಪಾಯಿಗಳ ಸಹಾಯಧನ ಸೌಲಭ್ಯವನ್ನು 47,682 ರೇಷ್ಮೆ ಭಾಗೀದಾರರಿಗೆ ನನ್ನ ಸರ್ಕಾರವು ಒದಗಿಸಿದೆ. ಪ್ರಮುಖ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸ್ಪರ್ಧಾತ್ಮಕ ದರ ನೀಡಲು ಇ-ಹರಾಜು, ಇ-ವೇಮೆಂಟ್ ಮತ್ತು ಇ-ಪೇಮೆಂಟ್ ವ್ಯವಸ್ಥೆ ಜಾರಿ ಮಾಡಿದ ದೇಶದ ಮೊದಲ ಹಾಗೂ ಏಕೈಕ ರಾಜ್ಯ ಕರ್ನಾಟಕವಾಗಿದೆ.

    ಗೋ ಸಂಪತ್ತಿನ ರಕ್ಷಣೆಗಾಗಿ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಅಶಕ್ತ, ಅನಾರೋಗ್ಯ ಪೀಡಿತ, ನಿರ್ಗತಿಕ, ರೈತರು ಸಾಕಲಾಗದ ಜಾನುವಾರುಗಳನ್ನು ಸಂರಕ್ಷಣೆ ಮಾಡಲು ರಾಜ್ಯ ಸರ್ಕಾರದಿಂದ 100 ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಸಂರಕ್ಷಿಸಲು. ಸಾರ್ವಜನಿಕ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಪುಣ್ಯ ಕೋಟಿ ದತ್ತು ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರು ತಮ್ಮ ವೇತನದಿಂದ 26.97 ಕೋಟಿ ರೂಪಾಯಿಗಳನ್ನು ಸ್ವ-ಪ್ರೇರಣೆಯಿಂದ ವಂತಿಗೆಯಾಗಿ ನೀಡಿರುವುದನ್ನು ನನ್ನ ಸರ್ಕಾರವು ಪ್ರಶಂಸಿಸುತ್ತದೆ. ಸರ್ಕಾರದ ವತಿಯಿಂದ ರಾಜ್ಯದ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗೋದ್ರೇಕ ನಿಯಂತ್ರಣಕ್ಕಾಗಿ ಒಂದು ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿದೆ. ಮರಣ ಹೊಂದಿದ ಕರು, ದನ ಮತ್ತು ಎತ್ತುಗಳಿಗೆ ಪರಿಹಾರಧನ ನೀಡಲು ಸರ್ಕಾರದಿಂದ 37 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

    2022-23ನೇ ಸಾಲಿನಲ್ಲಿ 15,066 ಕೋಟಿ ರೂಪಾಯಿಗಳ ಅಲ್ಪಾವಧಿ ಬೆಳೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಡಿಸೆಂಬರ್ ಅಂತ್ಯಕ್ಕೆ ಒಟ್ಟು 20.19 ಲಕ್ಷ ರೈತರಿಗೆ ವಿತರಿಸಲಾಗಿದೆ. ಡಿಸೆಂಬರ್ ಅಂತ್ಯದವರೆಗೆ 29638 ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ 1215 ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಲಾಗಿದೆ. ವಿವಿಧ ವರ್ಗಗಳಿಗೂ ವಿಸ್ತರಿಸಲಾಗಿದೆ. ಅದರಂತೆ 10,79 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ವರ್ಗಾಯಿಸಲಾಗಿದೆ.

    ಯಶಸ್ವಿನಿ ಯೋಜನೆಯಡಿ ದಿನಾಂಕ: 17-01-2023ರ ಅಂತ್ಯಕ್ಕೆ 32.60 ಲಕ್ಷ ಸದಸ್ಯರನ್ನು ನೊಂದಾಯಿಸಲಾಗಿದೆ. ಜನವರಿ ತಿಂಗಳಿನಿಂದ ಚಿಕಿತ್ಸಾ ಸೌಲಭ್ಯ ಪ್ರಾರಂಭಿಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ 6040 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಪ್ರತಿ ಸಂಘಕ್ಕೆ 3.99 ಲಕ್ಷ ರೂಪಾಯಿಗಳಂತೆ 193 ರೂಪಾಯಿಗಳ ವೆಚ್ಚದಲ್ಲಿ ಗಣಕೀಕರಣಗೊಳಿಸಲಾಗುತ್ತಿದೆ. ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಣಮೆಣಸಿನ ಕಾಯಿ ಉತ್ಪನ್ನಕ ಆಧುನಿಕ ಗುಣ ವಿಶ್ಲೇಷಣಾ ಘಟಕವನ್ನು ಅಂದಾಜು 4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ.

    ನನ್ನ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ 6038.98 ಕೋಟೆ ರೂಪಾಯಿಗಳ ಬಂಡವಾಳದಲ್ಲಿ ಪ್ರಸ್ತುತ ವರ್ಷದಲ್ಲಿ 27.85 ಲಕ್ಷ ಕುಟುಂಬಗಳ 50 ಲಕ್ಷ ಜನರಿಗೆ ಕೆಲಸ ಒದಗಿಸಿದೆ. ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆಯಡಿ ಆರಂಭದಿಂದ ಇಲ್ಲಿಯವರೆಗೆ 37.54 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದು, ಇದರಿಂದ ರಾಜ್ಯದ ಶೇಕಡ 61.34 ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದಂತಾಗಿದೆ. ಈ ಯೋಜನೆಯಡಿ 30,308 ಕೋಟಿ ರೂಪಾಯಿಗಳ ವೆಚ್ಚದಲ್ಲಿ 101 ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್ ಅಂತ್ಯದವರೆಗೆ 1119.08 ಕಿ.ಮೀ ಉದದ ರಸ್ತೆ ಕಾಮಗಾರಿಗಳನ್ನು 590.92 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಯೋಜನೆಯಡಿ 5216 ಗ್ರಾಮ ಪಂಚಾಯಿತಿಗಳಲ್ಲಿ ಘನ ತಾಜ್ಯ ನಿರ್ವಹಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ನೈರ್ಮಲ್ಯ ನೀತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬುದು ಹೆಮ್ಮೆಯ ವಿಷಯವಾಗಿದೆ.

    3 ರಿಂದ 6ರ ವಯೋಮಾನದ ಪೂರ್ವ ಪ್ರಾಥಮಿಕ ಮಕ್ಕಳ ಕಲಿಕ ಮತ್ತು ಯೋಗ ಕ್ಷೇಮಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಗೆ 2020ರಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಕೋವಿಡ್-19 ರಿಂದಾಗಿ ಉಂಟಾದ ಕಲಿಕಾ ಅಂತರವನ್ನು ಸರಿಪಡಿಸಲು ಎನ್.ಇ.ಪಿ. 2020ರ ದೂರದೃಷ್ಟಿಯಂತೆ ಚಟುವಟಿಕೆ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಕಲಿಕಾ ಚೇತರಿಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 9556 ಹೆಚ್ಚುವರಿ ಶಾಲಾ ಕೊಠಡಿಗಳು, ಶೌಚಾಲಯಗಳನ್ನು ನಿರ್ಮಿಸಲು 1923.5 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ರಾಜ್ಯದ ಸರ್ಕಾರಿ ಮತ್ತು ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 1 ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಒಳಗೊಂಡಂತೆ 46 ಲಕ್ಷ ವಿದ್ಯಾರ್ಥಿಗಳಿಗೆ 132,42 ರೂಪಾಯಿ ವೆಚ್ಚದಲ್ಲಿ ಮೊಟ್ಟೆ, ಅಥವಾ ಬಾಳೆಹಣ್ಣು/ಚಿಕ್ಕಿ ಹಾಗೂ 46 ದಿನಗಳು ಮಧ್ಯಾಹ್ನದ ಬಿಸಿ ಊಟದೊಂದಿಗೆ ಹಾಲನ್ನು ಸಹ ನೀಡಲಾಗುತ್ತಿದೆ. ಯೋಜನೆಯಡಿಯಲ್ಲಿ 61 ಲಕ್ಷ ವಿದ್ಯಾರ್ಥಿಗಳಿಗೆ ಶಾಲಾ ಪಠ್ಯ ಪುಸ್ತಕ ಮತ್ತು 46 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್‌ಗಳನ್ನು ಒದಗಿಸಲಾಗಿದೆ.

    ನನ್ನ ಸರ್ಕಾರವು ಉನ್ನತ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದರನ್ವಯ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತಂದಿದೆ. ಬೀದರ್, ಹಾವೇರಿ, ಚಾಮರಾಜನಗರ, ಬಾಗಲಕೋಟೆ, ಕೊಡಗು, ಕೊಪ್ಪಳ ಮತ್ತು ಹಾಸನದಲ್ಲಿ 7 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದು, 7 ಇಂಜಿನಿಯರಿಂಗ್ ಕಾಲೇಜುಗಳನ್ನು ಐ.ಐ.ಟಿ. ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಗುಣಮಟ್ಟ ಮತ್ತು ಪಾರದರ್ಶಕತೆ ತರಲು ನನ್ನ ಸರ್ಕಾರವು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಅನುಷ್ಠಾನಗೊಳಿಸಿದೆ.

    ನನ್ನ ಸರ್ಕಾರವು ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಸಮುದಾಯವನ್ನು ಮೇಲೆತ್ತಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರನ್ವಯ, ಶಿಕ್ಷಣ ಮತ್ತು ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇಕಡ 15 ರಿಂದ 17ಕ್ಕೆ ಪರಿಶಿಷ್ಟ ಪಂಗಡದವರಿಗೆ ಶೇಕಡ 3 ರಿಂದ 7ಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಿ ಐತಿಹಾಸಿಕ ಕ್ರಮಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಪುಸಕ್ತ ಸಾಲಿನಲ್ಲಿ ಎಸ್.ಸಿ.ಪಿ / ಟಿ.ಎಸ್.ಪಿ ಅಡಿ 29 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಅಮ್ಮತ ಜ್ಯೋತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಿಪಿಎಲ್‌ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಗಳನ್ನು ಉಚಿತ ವಿದ್ಯುತ್ ನೀಡಲಾಗುತ್ತಿದೆ. ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗುವ ಸಹಾಯಧನವನ್ನು 175 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. 100 ಅಂಬೇಡ್ಕರ್ ಹಾಸ್ಟೆಲ್‌ಗಳ ನಿರ್ಮಾಣವನ್ನೂ ಕೈಗೆತ್ತಿಕೊಳ್ಳಲಾಗಿದೆ. ಪ್ರಬುದ್ಧ ಯೋಜನೆಯಡಿ ಪರಿಶಿಷ್ಟಜಾತಿ ಮತ್ತು ಪಂಗಡದ 133 ವಿಶ್ವವಿದ್ಯಾಲಯಗಳಲ್ಲಿ ಪ್ರಾಯೋಜಿಸಲಾಗಿದೆ. ವಿದ್ಯಾರ್ಥಿಗಳನ್ನು ವಿದೇಶಿ ಉನ್ನತ ಶಿಕ್ಷಣಕ್ಕಾಗಿ ಪ್ರಾಯೋಜಿಸಲಾಗಿದೆ

    ವಿವಿಧ ಇಲಾಖೆಗಳ ಅಭಿವೃದ್ಧಿ ನಿಗಮಗಳ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪರಿಶಿಷ್ಟಜಾತಿ / ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇಕಡ 25ರಷ್ಟು ಪಾಲನ್ನು ಮೀಸಲಿರಿಸಲಾಗಿದೆ. ಭೂ ಒಡೆತನ ಯೋಜನೆಯಡಿ ಘಟಕ ವೆಚ್ಚ 15 ಲಕ್ಷ ಮತ್ತು 20 ಲಕ್ಷ ರೂಪಾಯಿಗಳಿದ್ದು, ಅದನ್ನು 20 ಲಕ್ಷ ರೂಪಾಯಿ ಹಾಗೂ 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಪರಿಶಿಷ್ಟಜಾತಿ ಮತ್ತು ಪಂಗಡದ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮತ್ತು ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಅವರ ಆತ್ಮಸ್ಥೆರ್ಯ ಹೆಚ್ಚಿಸಲು “ಓಬವ್ವ ಆತ್ಮ ರಕ್ಷಣಾ ಕಲೆ” ತರಬೇತಿಯನ್ನು ಪ್ರಾರಂಭಿಸಲಾಗಿದ್ದು, ಒಟ್ಟು 106314 ವಿದ್ಯಾರ್ಥಿನಿಯರಿಗೆ “ಆತ್ಮ ರಕ್ಷಣಾ ಕಲೆ” ತರಬೇತಿಯನ್ನು ನೀಡಲಾಗುತ್ತಿದೆ. ಮೆಟ್ರಿಕ್-ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದ್ದುದರಿಂದ, 2022-23ನೇ ಸಾಲಿನಲ್ಲಿ ಶೇಕಡಾ 25 ರಂತೆ ಸಂಖ್ಯಾಬಲವನ್ನು ಹೆಚ್ಚಳ ಮಾಡಿ, ಹಾಲಿ ಮಂಜೂರಾತಿ ಸಂಖ್ಯೆಗೆ ಹೆಚ್ಚುವರಿಯಾಗಿ 30000 ವಿದ್ಯಾರ್ಥಿಗಳಿಗೆ ಪುವೇಶಾತಿ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ. ಇಲಾಖಾ ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ 150 ಕೋಟಿ ರೂಪಾಯಿಗಳ ಅನುದಾನ ಒದಗಿಸಿದ್ದು, ಈ ಪೈಕಿ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾದ ರೂ.129.00 ಕೋಟಿಗಳ ಅನುದಾನದಲ್ಲಿ ರೂ.101.68 ಕೋಟಿಗಳನ್ನು ಮಾಡಲಾಗಿದ್ದು, 50 ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿರುತ್ತದೆ. 2022-233 ಸಾಲಿನಲ್ಲಿ 250 ಕೋಟಿ ರೂಪಾಯಿಗಳ ವೆಚ್ಚದಲ್ಲಿ 100 ಸಂಖ್ಯಾಬಲದ 50 ಕನಕದಾಸ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗಿರುತ್ತದೆ.

    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು “ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ” ಎಂಬ ಹೊಸ ಯೋಜನೆಯಡಿ ಶೈಕ್ಷಣಿಕ ಕೇಂದ್ರಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ಸಾಮರ್ಥ್ಯದ ಬಹುಮಹಡಿಯ ವಿದ್ಯಾರ್ಥಿ ನಿಲಯ ಸಮುಚ್ಚಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ಸ್ಥಾಪಿಸಲಾಗಿದೆ.

    ನನ್ನ ಸರ್ಕಾರವು ರಾಜ್ಯದ 29 ಸ್ಥಳಗಳಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗಾಗಿ 6 ರಿಂದ 12ನೇ ತರಗತಿಯವರೆಗೆ ಸಿ.ಬಿ.ಎಸ್.ಇ ಪಠ್ಯಕ್ರಮದೊಂದಿಗೆ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ. ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ಕುಂದುಕೊರತೆಗಳನ್ನು ಬಗೆಹರಿಸಲು 24/7 ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಜೈನ್, ಬೌದ್ಧ, ಸಿಖ್ ಮತ್ತು ಕ್ರೈಸ್ತ ಸಮುದಾಯದ ದೇವಾಲಯ/ಚರ್ಚ್ ನವೀಕರಣ, ದುರಸ್ತಿ/ಜೀರ್ಣೋದ್ಧಾರಕ್ಕಾಗಿ/ಸಮುದಾಯ ಭವನ ಕಟ್ಟಡ ನಿರ್ಮಾಣ ಮತ್ತು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಅಂದಾಜು 26 ಕೋಟಿ ರೂಪಾಯಿಗಳ 1. ವೆಚ್ಚದಲ್ಲಿ 186 ಸಂಸ್ಥೆಗಳಿಗೆ ಸಹಾಯಧನ ನೀಡಿದೆ. ವಕ್ಫ್​ ಆಸ್ತಿಗಳ ಡೋನ್ ಸರ್ವೇ ಕಾರ್ಯಕ್ಕಾಗಿ 2.5 ಕೋಟಿ ರೂಪಾಯಿಗಳನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಮತ್ತು ಕರ್ನಾಟಕ ಉರ್ದು ಅಕಾಡೆಮಿ ಕಛೇರಿಗಳ ಉದ್ದೇಶಕ್ಕಾಗಿ 17.30 ಕೋಟಿ ರೂಪಾಯಿ ವೆಚ್ಚದಲ್ಲಿ ಕೆ.ಎಂ.ಡಿ.ಸಿ ಭವನವನ್ನು ನಿರ್ಮಿಸಲಾಗಿದೆ. ಕರ್ನಾಟಕ ಉರ್ದು ಅಕಾಡೆಮಿಯ ವತಿಯಿಂದ ಶಾಸ್ತ್ರೀಯ ಭಾಷೆಗಳ ಉತ್ಕೃಷ್ಟ ಸಾಹಿತ್ಯದ ಪುಸ್ತಕಗಳನ್ನು ಉರ್ದು ಭಾಷೆಗೆ ಅನುವಾದ ಮಾಡುವ ಪ್ರಕ್ರಿಯೆಯು ಜಾರಿಯಲ್ಲಿದೆ.

    ನನ್ನ ಸರ್ಕಾರವು ಮಹಿಳ ಮತ್ತು ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದು, ಅವರ ಭದ್ರತೆ ಮತ್ತು ಶ್ರೇಯೋಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕಾಗಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಗರ್ಭಿಣಿಯರು, ಬಾಣಂತಿಯರು, 6 ತಿಂಗಳಿನಿಂದ 6 ವರ್ಷದ ಮಕ್ಕಳನ್ನು ಒಳಗೊಂಡಂತೆ ಸುಮಾರು 52 ಲಕ್ಷ ಫಲಾನುಭವಿಗಳಿಗೆ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸಲಾಗುತ್ತಿದೆ. ತೀವು ಅಪೌಷ್ಟಿಕ ಮಕ್ಕಳಿಗೆ ನೀಡಲಾಗುತ್ತಿದ್ದ. ಕ್ಷೀರಭಾಗ್ಯ ಮತ್ತು ಸೃಷ್ಟಿ ಯೋಜನೆಯನ್ನು ಸಾಧಾರಣ ಅಪೌಷ್ಟಿಕ ಮಕ್ಕಳಿಗೂ ವಿಸ್ತರಿಸಲಾಗಿದೆ. ಅಮೃತ ಅಂಗನವಾಡಿ ಯೋಜನೆಯಡಿ ಆಯ್ಕೆ 750 ಅಂಗನವಾಡಿ ಕೇಂದ್ರಗಳನ್ನು ಮೂಲಸೌಕರ್ಯಗಳೊಂದಿಗೆ ಮೇಲ್ಮರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1ಲಕ್ಷ ರೂಪಾಯಿಯಂತೆ 7.5 ಕೋಟಿ ರೂಪಾಯಿ ನೆರವು ಒದಗಿಸಲಾಗಿದೆ. ರಾಜ್ಯ ಅನುದಾನದಲ್ಲಿಯೇ ಬೇಡಿಕೆಗಳಿಗೆ ಅನುಸಾರವಾಗಿ ಒಟ್ಟು 4244 ಹೊಸ ಅಂಗನವಾಡಿ ಕೇಂದ್ರಗಳನ್ನು 268.98 ಕೋಟಿ ರೂಪಾಯಿಗಳಲ್ಲಿ ಪ್ರಾರಂಭಿಸಲು ಮಂಜೂರಾತಿ ನೀಡಲಾಗಿದೆ. ಸರ್ಕಾರದ

    ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ನೀಡಲಾಗುತ್ತಿರುವ ಗೌರವಧನವನ್ನು ಅವರುಗಳು ಸಲ್ಲಿಸಿರುವ ಸೇವಾ ಅವಧಿಯ ಆಧಾರದ ಮೇರೆಗೆ ಕನಿಷ್ಠ ರೂ.1000 ರಿಂದ ರೂ.1500 ರವರೆಗೆ ಹೆಚ್ಚಿಸಲಾಗಿದೆ. ಬಾಲ್ಯ ವಿವಾಹವನ್ನು ತಡೆಗಟ್ಟುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ “ಸ್ಪೂರ್ತಿ” ಯೋಜನೆಯನ್ನು ಬಾಗಲಕೋಟೆ, ವಿಜಯಪುರ, ರಾಯಚೂರು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಯಲ್ಲಿನ 11 ತಾಲ್ಲೂಕುಗಳಲ್ಲಿ 12.5 ಕೋಟಿ ರೂಪಾಯಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಲಿಂಗತ್ಯ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವು ನಿಟ್ಟಿನಲ್ಲಿ 3403 ಲಿಂಗತ್ವ ಅಲ್ಪಸಂಖ್ಯಾತರ ವಸತಿ ರಹಿತರಿಗೆ ಡಾ: ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ ಮತ್ತು ದೇವರಾಜು ಅರಸು ಯೋಜನೆಯಡಿ 3403 ಮನೆಗಳನ್ನು ಮಂಜೂರು ಮಾಡಲಾಗಿದೆ.

    ನನ್ನ ಸರ್ಕಾರದ ಆದ್ಯತೆಯು ಸಾರ್ವಜನಿಕರಿಗೆ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆಯನ್ನು ನಿರಂತರವಾಗಿ ಸುಧಾರಿಸುವಲ್ಲಿ ಕೇಂದ್ರೀಕೃತವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಹಾಗೂ ಜನರಿಗೆ ಸ್ಥಳೀಯವಾಗಿಯೇ ತಜ್ಞರ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ 53 ಪ್ರಾಥಮಿಕ ಆರೋಗ ಕೇಂದ್ರಗಳನ್ನು ಸಮುದಾಯ ಉನ್ನತೀಕರಿಸಲಾಗಿದೆ. ಆರೋಗ್ಯ ಕೇಂದ್ರಗಳಾಗಿ 47 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, 26 ತಾಲ್ಲೂಕು ಆಸ್ಪತ್ರೆ ಹಾಗೂ 1 ಜಿಲ್ಲಾ ಆಸ್ಪತ್ರೆಗಳನ್ನು ಉನ್ನತೀಕರಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು 781.30 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. 45 ತಾಲ್ಲೂಕು ಆಸ್ಪತ್ರೆಗಳನ್ನು 3 ಜಯದೇವ ಹೃದ್ರೋಗ ಸಂಸ್ಥೆಗಳೊಂದಿಗೆ ಮ್ಯಾಪಿಂಗ್ ಮಾಡುವ ಮೂಲಕ ಸ್ಥಳೀಯವಾಗಿ ಹೃದ್ರೋಗ ಚಿಕಿತ್ಸೆ ಒದಗಿಸಲು ಕ್ರಮವಹಿಸಲಾಗಿದೆ.

    ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಕರ್ನಾಟಕವು ಪ್ರವರ್ತಕವಾಗಿದೆ ಮತ್ತು ನನ್ನ ಸರ್ಕಾರವು ಮೇ 2022 ರಂದು ಗುಜರಾತ್​ನಲ್ಲಿ ನಡೆಯಲಾದ “ಸ್ವಾಸ್ಥ್ಯ ಚಿಂತನ್ ಶಿವಿ‌” ದಲ್ಲಿ ಇ-ಮನಸ್ ಉಪಕ್ರಮವನ್ನು ರಾಜ್ಯದ ಅತ್ಯುತ್ತಮ ಅಭ್ಯಾಸ ಎಂದು ಪುಸ್ತುತ ಪಡಿಸಿರುತ್ತದೆ. ರಾಜ್ಯದ ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದ್ದು, 271 ನಮ್ಮ ಕ್ಲಿನಿಕ್ ಗಳು ಕಾರ್ಯಾರಂಭ ಮಾಡಿವೆ. ಅನುಮೋದನೆಯಾಗಿರುವ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳಲ್ಲಿ 53 ಮಹಿಳಾ ಸ್ವಾಸ್ಥ್ಯ ಕೇಂದ್ರಗಳು ಸಾರ್ವಜನಿಕ ಸೇವೆಗೆ ಸಿದ್ಧವಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿವೆ.

    ಪ್ರೇಯಸಿಯ ಪಾಲಕರು, ಕಾಡುಗೋಡಿ ಪೊಲೀಸರ ವಿರುದ್ಧ ಕಿರುಕುಳ ಆರೋಪ ಮಾಡಿ ವಿಷ ಕುಡಿದ ಯುವಕ

    ಅಸಹಜ ಲೈಂಗಿಕ ಕ್ರಿಯೆ, ವರದಕ್ಷಿಣೆ ಕಿರುಕುಳ ಆರೋಪ: ರಾಖಿ ಪತಿ ಆದಿಲ್​ಗೆ ನ್ಯಾಯಾಂಗ ಬಂಧನ

    ಪಠಾಣ್​ ಸಿನಿಮಾ ಇಷ್ಟ ಆಗಲಿಲ್ಲ ಎಂದ ಮಗುವಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ವೈರಲ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts