ಮಂಗಳೂರು: ನಗರದ ಬಿಜೈ ಮತ್ತು ಕೋರ್ಟ್ ಸಮೀಪ ಕಾಣಿಸಿಕೊಂಡ ಉಗ್ರರ ಪರ ಗೋಡೆ ಬರಹ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ನಿವಾಸಿಗಳಾದ ಮಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹ್ಮದ್ (21) ಬಂಧಿತ ಆರೋಪಿಗಳು.
ಆರೋಪಿಗಳಲ್ಲಿ ಮೊಹಮ್ಮದ್ ಶಾರೀಕ್ ನಗರದಲ್ಲಿ ಕಳೆದ ಅಕ್ಟೋಬರ್ ತಿಂಗಳಿನಿಂದ ಆನ್ಲೈನ್ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ ಎಂದು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಇಬ್ಬರು ಆರೋಪಿಗಳು ನ.27ರಂದು ಬಿಜೈ ವಸತಿ ಸಮುಚ್ಚಯದ ಕಂಪೌಂಡ್ ಹಾಲ್ ಮತ್ತು ನ.29ರಂದು ಜಿಲ್ಲಾ ಕೋರ್ಟ್ ಸಮೀಪ ಬೈಕ್ನಲ್ಲಿ ಬಂದು ಉಗ್ರರ ಪರ ವಿವಾದಾಸ್ಪದ ಬರಹ ಬರೆದಿದ್ದರು.
ಬಂಧಿತರ ಪೈಕಿ ಮಹಮ್ಮದ್ ಶಾರೀಕ್ ಬಿ.ಕಾಂ ವಿದ್ಯಾರ್ಥಿಯಾಗಿದ್ದು, ಇನ್ನೋರ್ವ ಮಾಝ್ ಮುನೀರ್ ಎಂ.ಟೆಕ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ.