ತೇರದಾಳ: ಕಳೆದ ಮೂರು ದಿನಗಳಿಂದ ತೇರದಾಳ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಂಬೇಡ್ಕರ್ ವೃತ್ತ ಸಮೀಪದ ದಲಿತ ಕಾಲನಿ ಮನೆಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಭೇಟಿ ನೀಡಿ ಪರಿಶೀಲಿಸಿದರು.
ನಗರದಲ್ಲಿನ ಎಲ್ಲ ಗಲೀಜು ನೀರು ಇಲ್ಲಿನ ದೊಡ್ಡ ಚರಂಡಿಗೆ ಸೇರುತ್ತದೆ. ಆದರೆ ಚರಂಡಿ ಕಿರಿದಾಗಿದ್ದರಿಂದ ನೀರು ಮುಂದೆ ಹೋಗದೆ ಮನೆಗಳಿಗೆ ನುಗ್ಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ಸಮಸ್ಯೆ ತೋಡಿಕೊಂಡರು. ಚರಂಡಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಗಲೀಜು ತೆಗೆದ ಮೇಲೆ ಅದನ್ನು ತುಂಬಿಕೊಂಡು ಕೂಡ ಹೋಗುವುದಿಲ್ಲ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದರೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿ ಚರಂಡಿ ನಿರ್ಮಾಣಕ್ಕಾಗಿ ಅನುದಾನ ನೀಡಿದ್ದರೂ ಇನ್ನೂ ಏಕೆ ಕೆಲಸ ಆಗಿಲ್ಲ ? ಏನು ಕೆಲಸ ಮಾಡುತ್ತಿದ್ದೀರಿ ಎಂದು ಪುರಸಭೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಮಠಪತಿ, ಮುಖಂಡರಾದ ಪ್ರಭಾಕರ ಬಾಗಿ, ರಮೇಶ ಧರೆನ್ನವರ, ನಾಗಪ್ಪ ದೊಡಮನಿ, ಜಿನ್ನಪ್ಪ ದೊಡಮನಿ, ಸುಭಾಸ ರಾಯಣ್ಣವರ, ಅಂಬಿಕಾ ತೆಳಗಡೆ, ರಾಮಣ್ಣ ಹಿಡಕಲ್, ಮಹಾವೀರ ಕೊಕಟನೂರ, ಸುರೇಶ ರೇನಕೆ, ಬಾಳೂ ದೇಶಪಾಂಡೆ, ಷಣ್ಮುಖ ಗಾಡದಿ, ನಾಗಪ್ಪ ಪುರಾಣಿಕ, ಎ್.ಬಿ. ಗಿಡ್ಡಿ, ಬಸಪ್ಪ ಮುಕರಿ, ವಿದ್ಯಾಧರ ಧರೆನ್ನವರ ಸೇರಿ ಇತರರಿದ್ದರು.
ಸಸಾಲಟ್ಟಿ ಗ್ರಾಮದಲ್ಲಿ ಪರಿಶೀಲನೆ
ತೇರದಾಳದ ಸಮೀಪದ ಸಸಾಲಟ್ಟಿ ಗ್ರಾಮದ ಪರ್ವತನ್ನವರ ಹಾಗೂ ಸರಿಕರ ಗಲ್ಲಿಗಳಿಗೆ ಶಾಸಕ ಸಿದ್ದು ಸವದಿ ಗುರುವಾರ ಭೇಟಿ ನೀಡಿ, ಮಳೆ ನೀರು ಮನೆಗಳಿಗೆ ನುಗ್ಗಿರುವ ಕುರಿತು ನಿವಾಸಿಗಳಿಂದ ಮಾಹಿತಿ ಪಡೆದರು. ಚರಂಡಿ ನೀರು ಸರಳವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಪ್ರಶಾಂತ ಚನಗೊಂಡ, ಗ್ರಾಮಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಕವಟಗೊಪ್ಪ, ಉಪನ್ಯಾಸಕ ಡಾ.ಶಿವನಿಂಗ ಸರಿಕರ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.