ಹೈದರಾಬಾದ್: ತೆಲಂಗಾಣದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿಯು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಮಾಡಿದ ಅವಮಾನ.
ಹೀಗೆಂದು ಗುಡುಗಿದ್ದಾರೆ ಫೈರ್ ಬ್ರ್ಯಾಂಡ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.
‘ಮುಸ್ಲಿಂ ಮೀಸಲಾತಿ’ಯು ಎಸ್ಸಿ, ಎಸ್ಟಿ ಮತ್ತು ಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ಷಡ್ಯಂತ್ರದ ಭಾಗವಾಗಿದೆ, ಇದು ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಅವರು ಹೇಳಿದರು.
ತೆಲಂಗಾಣದ ಕುಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಚುನಾವಣೆ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
ಮುಸ್ಲಿಮರಿಗೆ ಮೀಸಲಾತಿ ನೀಡುವುದು “ಅಸಂವಿಧಾನಿಕ” ಮತ್ತು ಅದನ್ನು ಯಾವುದೇ ಕಾರಣಕ್ಕೂ ತರಲು ಬಿಡಬಾರದು. ಆದರೆ, ಬಿಆರ್ಎಸ್ ಮತ್ತು ಕಾಂಗ್ರೆಸ್ ಎರಡೂ ದೇಶವನ್ನು ಹೊಸ ವಿಭಜನೆಯತ್ತ ಕೊಂಡೊಯ್ಯಲು ಬಯಸುತ್ತಿವೆ ಎಂದು ಅವರು ಆರೋಪಿಸಿದರು.
ತೆಲಂಗಾಣದಲ್ಲಿ ಈಗ ತುಷ್ಟೀಕರಣ ರಾಜಕಾರಣದ ಕೊಳಕು ಆಟ ಕಂಡು ಬರುತ್ತಿದೆ. ಬಿಆರ್ಎಸ್ ಸರ್ಕಾರವು ಮುಸ್ಲಿಂ ಮೀಸಲಾತಿ ಘೋಷಿಸಿದಾಗ ಸಮಾಜವನ್ನು ಒಡೆಯಲು ಸರ್ಕಾರ ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ನಾವು ತೆಲಂಗಾಣದಲ್ಲಿ ನೋಡಿದ್ದೇವೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
ತೆಲಂಗಾಣದಲ್ಲಿ ಬಿಜೆಪಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದ ಅವರು, ಕೇಸರಿ ಪಕ್ಷವು ಆಯ್ಕೆಯಾದರೆ, “ಅಸಂವಿಧಾನಿಕ” ಧರ್ಮ ಆಧಾರಿತ ಮೀಸಲಾತಿ ರದ್ದುಪಡಿಸುತ್ತದೆ. ಒಬಿಸಿಗಳು, ಎಸ್ಸಿ ಮತ್ತು ಎಸ್ಟಿಗಳಿಗೆ ಇದರ ಪ್ರಯೋಜನ ನೀಡುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದ ಆದಿತ್ಯನಾಥ್, ರಾಜ್ಯ ಸರ್ಕಾರ ಯುವಕರು, ರೈತರು ಮತ್ತು ಮಹಿಳೆಯರಿಗೆ ಚುನಾವಣೆ ಭರವಸೆಗಳನ್ನು ಈಡೇರಿಸದೆ ವಂಚಿಸಿದೆ. ಪ್ರತ್ಯೇಕ ತೆಲಂಗಾಣ ಆಂದೋಲನದ ಮುಖ್ಯ ಯೋಜನೆಯಾದ “ನೀರು, ನಿಧಿ ಮತ್ತು ಉದ್ಯೋಗ” ಒದಗಿಸಲು ಕೆಸಿಆರ್ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಹೈದರಾಬಾದ್ ವಿಮೋಚನೆ ದಿನ ಆಚರಣೆಯ ಭರವಸೆ:
BRS ಅನ್ನು “ಭ್ರಷ್ಟಾಚಾರ್ ರಿಶ್ವತ್ಖೋರಿ ಸಮಿತಿ” (ಭ್ರಷ್ಟಾಚಾರ, ಲಂಚಗುಳಿ ಸಮಿತಿ) ಎಂದು ಜರಿದ ಯೋಗಿ, ಬಿಜೆಪಿ ಅಧಿಕಾರಕ್ಕೆ ಬಂದರೆ, ಸರ್ಕಾರದಿಂದಲೇ ”ಹೈದರಾಬಾದ್ ವಿಮೋಚನೆ ದಿನ”ವನ್ನು ಆಚರಿಸುತ್ತದೆ ಎಂದು ಹೇಳಿದರು. ನಿಜಾಮ್ ಆಳ್ವಿಕೆಯಲ್ಲಿದ್ದ ರಾಜ್ಯವು ಅಧಿಕೃತವಾಗಿ ಭಾರತೀಯ ಒಕ್ಕೂಟಕ್ಕೆ ಸೆಪ್ಟೆಂಬರ್ 17, 1948ರಂದು ವಿಲೀನಗೊಂಡಿದ್ದು, ಇದು ಹೈದರಾಬಾದ್ ವಿಮೋಚನಾ ದಿನವಾಗಿದೆ.
ರಾಜಸ್ಥಾನ ವಿಧಾನಸಭೆ ಚುನಾವಣೆ; ಮಧ್ಯಾಹ್ನದವರೆಗೆ 55.63ರಷ್ಟು ಮತದಾನ; ಮೆಹಂದಿ ಹಚ್ಚಿಕೊಂಡ ಕೈಯಿಂದಲೇ ವಧು ಮತದಾನ