ಹೈದರಾಬಾದ್: ನಿವೃತ್ತ ಪೊಲೀಸ್ ಅಧಿಕಾರಿಯನ್ನು ಕೊಲೆಗೈದು ಮೃತದೇಹದ ಮುಂದೆ ನಿಂತು ಆರೋಪಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಫೋಟೋದಲ್ಲಿರುವ ಮೃತ ವ್ಯಕ್ತಿಯನ್ನು ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಶಿವರಾಜ್(62) ಎಂದು ಗುರುತಿಸಲಾಗಿದೆ. ಆರೋಪಿಯ ಹೆಸರು ವಿವೇಕ್ ಎಂದು ತಿಳಿದುಬಂದಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಉತ್ನೂರ್ ಸಮೀಪದ ಗಂಗಣ್ಣಪೇಟೆ ಮೂಲದವರಾಗಿದ್ದು, ಮಾರ್ಚ್ 6ರಂದು ಕೊಲೆಯಾಗಿದ್ದಾರೆ. ಕುಟುಂಬ ಕಲಹವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅದರಲ್ಲಿ ವಿವೇಕ್ ಕೂಡ ಒಬ್ಬನಾಗಿದ್ದಾನೆ. ಅಲ್ಲದೆ, ವಿವೇಕ್ ಮೃತ ಶಿವರಾಜ್ ಸೋದರ ಸಂಬಂಧಿಯಾಗಿದ್ದಾನೆ.
ಮೂಲಗಳ ಪ್ರಕಾರ ವಿವೇಕ್ ಇಂಜಿನಿಯರ್ ಶಿಕ್ಷಣವನ್ನು ಮೊಟಕುಗೊಳಿಸಿದ್ದಾನೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಆರೋಪಿ ವಿವೇಕ್ ತಂದೆ ಜಯರಾಜ್ ಮತ್ತು ಮೃತ ಶಿವರಾಜ್ ನಡುವೆ ಕಲಹ ಉಂಟಾಗಿತ್ತು ಎಂದು ತಿಳಿದುಬಂದಿದೆ.
ವಿವೇಕ್ ಮತ್ತು ಶಿವರಾಜ್ ಮಾರ್ಚ್ 6ರಂದು ತಮ್ಮ ಆಪ್ತರ ಜತೆಯಲ್ಲಿ ಗ್ರಾಮದ ಪ್ರಾರ್ಥನಾ ಮಂದಿರದ ಬಳಿ ಭೇಟಿ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು, ತಾರಕಕ್ಕೇರಿದಾಗ ವಿವೇಕ್ ಕಟ್ಟಿಗೆಯೊಂದನ್ನು ತೆಗೆದುಕೊಂಡು ಶಿವರಾಜ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಸ್ಥಳದಲ್ಲೇ ಕುಸಿದುಬಿದ್ದ ಶಿವರಾಜ್, ಸಾಕಷ್ಟು ರಕ್ತಸ್ರಾವವಾಗಿ ಪ್ರಾಣಬಿಟ್ಟಿದ್ದಾನೆ ಎಂದು ತನಿಖಾ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ತದನಂತರ ಮೃತದೇಹವನ್ನು ಶವಪರೀಕ್ಷೆಗಾಗಿ ಉತ್ನೂರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಪಿಯನ್ನು ಬಂಧಿಸಿ, ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಯಿತು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಕೊಲೆಗೆ ಸಂಬಂಧಪಟ್ಟ ಫೋಟೋವೊಂದು ವೈರಲ್ ಆಗಿದ್ದು, ಇದನ್ನು ಯಾವಾಗ ಕ್ಲಿಕ್ಕಿಸಲಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆಯ ಮೊರೆ ಹೋಗಿದ್ದಾರೆ. ಅಲ್ಲದೆ, ಫೋಟೋವನ್ನು ಸಾಕ್ಷ್ಯಾಧಾರವನ್ನಾಗಿ ಪರಿಗಣಿಸಲಾಗಿದೆ. (ಏಜೆನ್ಸೀಸ್)
ಪಾರ್ಸೆಲ್ ತೆಗೆದುಕೊಳ್ಳುವುದು ತಡವಾಯಿತೆಂದು ಜೊಮ್ಯಾಟೊ ಸಿಬ್ಬಂದಿಗೆ ಸಾಯುವಂತೆ ಹೊಡೆದ ಹೋಟೆಲ್ ಸಿಬ್ಬಂದಿ
ಹೋಳಿ ಸಂಭ್ರಮದಲ್ಲಿ ಚೆಲ್ಲಿತು ರಕ್ತ; ಬಣ್ಣದಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣವನ್ನೇ ಬಿಟ್ಟ..