ಅಹಮದಬಾದ್: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಸೈಬರ್ ಕಳ್ಳರು ದೋಚುವ ಕಥೆಗಳನ್ನು ಕೇಳುತ್ತಿರುತ್ತವೆ. ಇಂತಹವರಿಂದ ಎಚ್ಚರವಾಗಿರಬೇಕು ಎಂದು ಸರ್ಕಾರಗಳು ಎಷ್ಟೇ ಎಚ್ಚರಿಕೆ ನೀಡಿದರೂ ಸಹ ಜನರು ಮೋಸ ಹೋಗುತ್ತಿರುವ ಪ್ರಕರಣಗಳು ಮಾತ್ರ ಹೆಚ್ಚುತ್ತಿವೆ.
ಹಣ ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಅತ್ಯಂತ ಜಾಗರೂಕರಾಗಿರಬೇಕು. ದುಪ್ಪಟ್ಟು ಹಣದ ಆಸೆಗೆ ಒಳಗಾಗಿ ಪಡೆದುಕೊಳ್ಳುವುದಕ್ಕಿಂತೆ ಕಳೆದುಕೊಳ್ಳುವುದೇ ಹೆಚ್ಚು. ಇದೀಗ ಘಟನೆ ಒಂದರಲ್ಲಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಪರಿಚಯವಾದ ವಂಚಕರ ಮಾತಿಗೆ ಮರುಳಾಗಿ ವ್ಯಕ್ತಿಯೊಬ್ಬರು ಬರೋಬ್ಬರಿ 1 ಕೋಟಿ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಗುಜರಾತಿನ ಅಹಮದಬಾದಿನಲ್ಲಿ ನಡೆದಿದೆ.
ಮಹಿಳೆ ಹೆಸರಿನಲ್ಲಿ ವಂಚನೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಸಿಸಿಬಿ ಅಧಿಕಾರಿಯೊಬ್ಬರು ಕುಲದೀಪ್ ಪಟೇಲ್ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿ ಒಂದು ಕೋಟಿ ರೂಪಾಯಿ ಹಣ ಕಳೆದುಕೊಂಡಿರುವುದಾಗಿ ದೂರು ದಾಖಲಿಸಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಅದಿತಿ (ವಂಚಕರು ಬಳಸಿರುವ ಹೆಸರು) ಎಂಬ ಮಹಿಳೆ ತಮ್ಮ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಂಚಕರು ಕುಲದೀಪ್ ಪಟೇಲ್ರನ್ನು ಪ್ರತಿಷ್ಠಿತ ಮ್ಯಾಟ್ರಿಮೋನಿ ಒಂದರಲ್ಲಿ ಅದಿತಿ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡಿದ್ದು, ಯುಕೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ದಿನ ಕಳೆದಂತೆ ಸಂತ್ರಸ್ತನ ನಂಬಿಕೆ ಗಳಿಸಿದ ವಂಚಕರು ತಮ್ಮದು ಸ್ವಂತ ಕಂಪನಿ ಇರುವುದಾಗಿ ಬಿಂಬಿಸಿಕೊಂಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಜತೆಗಿನ ಮೈತ್ರಿ ಇನ್ನೂ ಸುದೀರ್ಘ ಚರ್ಚೆಯಾಗಿಲ್ಲ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
ದುರದೃಷ್ಟಕರ
ಸಂತ್ರಸ್ತನ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ವಂಚಕರು ಕ್ರಿಪ್ಟೋಕರೆನ್ಸಿ ಮಾದರಿಯ ಬ್ಯಾನೋಕಾಯಿನ್ನಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿದ್ದಾರೆ. ಇವರ ಮಾತನ್ನು ನಂಬಿದ ಸಂತ್ರಸ್ತ ಅವರು ಹೇಳಿದಂತೆ ಹೂಡಿಕೆ ಮಾಡಲು ಶುರು ಮಾಡಿದ್ದು, 1.34 ಕೋಟಿ ರೂಪಾಯಿ ಹೂಡಿದ್ದಾರೆ. ಬಳಿಕ ಹಣ ವಿತ್ ಡ್ರಾ ಮಾಡಲು ಮುಂದಾದಾಗ ತಮ್ಮ ಬ್ಯಾನೋಕಾಯಿನ್ ಖಾತೆಯನ್ನು ಫ್ರೀಜ್ ಮಾಡಿರುವುದಾಗಿ ವಂಚಕರು ಹೇಳಿದ್ದಾರೆ. ಈ ಬಗ್ಗೆ ಪರಿಶೀಲಿಸಿದಾಗ ಆತ ಮೊಸ ಹೋಗಿರುವುದು ಬೆಳಕಿಗೆ ಬಂದಿದೆ.
ಸಂತ್ರಸ್ತ ನೀಡಿದ ದೂರಿನ ಮೇರೆಗೆ ವಂಚಕರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ. ಸೈಬರ್ ವಂಚನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು ಸಹ ಮೋಸ ಹೋಗುತ್ತಿರುವುದು ದುರದೃಷ್ಟಕರ ಸಂಗತಿ ಎಂದು ರ್ಸತಳೀಯ ಸಿಸಿಬಿ ಅಧಿಕಾರಿ ತಿಳಿಸಿದ್ದಾರೆ.