ವಿ.ಮಂಜುನಾಥ್ ಸೂಲಿಬೆಲೆ
ಭರ್ಜರಿ ಫಸಲು ಹಾಗೂ ಆದಾಯದ ನಿರೀಕ್ಷೆ ಮಾಡಿ ಪನೀರ್ ಪತ್ರೆ ಬೆಳೆದಿದ್ದ ರೈತರ ಕಣ್ಣಲ್ಲಿ ಕರೊನಾ ಅಕ್ಷರಶಃ ಕಣ್ಣೀರು ಸುರಿಸುವಂತೆ ಮಾಡಿದೆ.
ಹೊಸಕೋಟೆ ತಾಲೂಕಿನ ಹಲವು ಗ್ರಾಮದ ರೈತರು ಪನೀರ್ ಪತ್ರೆ ಬೆಳೆದಿದ್ದಾರೆ. ಆದರೆ ಕರೊನಾ ಕಾರಣ ಸಮರ್ಪಕ ಮಾರುಕಟ್ಟೆ ಇಲ್ಲದೆ ಕಟಾವಿಗೆ ಬಂದ ಪತ್ರೆ ತೋಟದಲ್ಲಿ ಒಣಗಿದೆ. ಇದರಿಂದ ಹಾಕಿದ ಬಂಡವಾಳ ಬಾರದೆ, ರೈತ ಕಂಗಾಲಾಗಿದ್ದಾನೆ.
2 ಎಕರೆಯಲ್ಲಿ ಪನೀರ್ ಪತ್ರೆ ಬೆಳೆಯಲು ಸುಮಾರು 2 ಲಕ್ಷ ರೂ. ಬಂಡವಾಳ ಹಾಕಿದ್ದು, 3 ಲಕ್ಷ ರೂ. ವೆಚ್ಚ ಮಾಡಿ ಕೊಳವೆಬಾವಿ ಕೊರೆಸಲಾಗಿತ್ತು. ಪ್ರತಿ 2 ತಿಂಗಳಿಗೊಮ್ಮೆ ಫಸಲು ಕಟಾವು ಮಾಡಿ ಮಾರಾಟ ಮಾಡಿದರೆ 20 ರಿಂದ 25 ಸಾವಿರ ಆದಾಯ ಬರುತ್ತಿತ್ತು.
ಆದರೆ ಫಸಲು ಬೆಳೆದ ಮೇಲೆ ಕೇವಲ ಒಂದು ಬಾರಿ ಮಾತ್ರ ಕಟಾವು ಮಾಡಿ ಮಾರಾಟ ಮಾಡಲಾಗಿದೆ. ನಂತರ ತೋಟದಲ್ಲೇ ಬಿಟ್ಟಿದ್ದು ಕೀಟಗಳು ಬೆಳೆ ಹಾಳು ಮಾಡಿವೆ. ಪರಿಣಾಮ ತೋಟವನ್ನೇ ನಾಶ ಮಾಡುವ ಸನ್ನಿವೇಶ ಎದುರಾಗಿದೆ ಎಂದು ರೈತ ಚೀಮಂಡಹಳ್ಳಿ ರೈತ ಅಂಬರೀಷ್ ಅಳಲನ್ನು ತೋಡಿಕೊಂಡರು.
ಪನೀರ್ ಪತ್ರೆಯನ್ನು ಸುವಾಸನೆಗೆ ಮಾತ್ರ ಬಳಕೆ ಮಾಡುವುದರಿಂದ ಸರ್ಕಾರ ಅದನ್ನು ಹೂವು ಬೆಳೆಗಳಿಗೆ ನೀಡಿದಂತೆ ಪರಿಹಾರ ನೀಡುವ ಬಗ್ಗೆ ಘೋಷಣೆ ಮಾಡಿಲ್ಲ. ಹೊಸಕೋಟೆ ತಾಲೂಕಿನಲ್ಲಿ ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ಪನೀರ್ ಪತ್ರೆ ಬೆಳೆಯಲಾಗಿದೆ. ಸರ್ಕಾರ ಪರಿಹಾರ ನೀಡಲು ಆದೇಶಿಸಿದರೆ ಮಾತ್ರ ಪರಿಹಾರಕ್ಕೆ ಕ್ರಮಕೈಗೊಳ್ಳಬಹುದು.
ಪ್ರಶಾಂತ್, ಹಿರಿಯ ನಿರ್ದೇಶಕ, ತೋಟಗಾರಿಕೆ ಇಲಾಖೆ ಹೊಸಕೋಟೆ