More

    ಕಣ್ಣೀರು ಬಲಹೀನತೆಯ ಸಂಕೇತವಲ್ಲ: ಸ್ವಾಮಿ ವಿನಯಾನಂದ ಸರಸ್ವತಿ

    ಶಿವಮೊಗ್ಗ: ಮನಸ್ಸಿಗೆ ನೋವಾದಾಗ, ಭಾವೋದ್ವೇಗಕ್ಕೆ ಒಳಗಾದಾಗ ಕಣ್ಣೀರು ಬಂದರೆ ಭಗವಂತನ ಸನ್ನಿಧಿಯಲ್ಲಿ ಅತ್ತು ಬಿಡಬೇಕು. ಇದರಿಂದ ಮನಸ್ಸು ನಿರಾಳವಾಗುತ್ತದೆ. ಕಣ್ಣೀರು ಬಲಹೀನತೆಯ ಸಂಕೇತವಲ್ಲ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿನಯಾನಂದ ಸರಸ್ವತಿ ಹೇಳಿದರು.

    ನಗರದ ಹೊರವಲಯದ ಕಲ್ಲಗಂಗೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಳೇ ಮತ್ತೂರು ರಸ್ತೆಯ ಸದ್ಗುರು ಶ್ರೀ ಸತ್ ಉಪಾಸಿ ದಿವ್ಯಾಶ್ರಮದ ಸದ್ಭಕ್ತರಿಂದ ಆಯೋಜಿಸಿದ್ದ ವಿಶೇಷ ಭಜನೆ ಮತ್ತು ಸತ್ಸಂಗದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬದುಕಿನಲ್ಲಿ ಕಷ್ಟ-ಸುಖ, ನೋವು-ನಲಿವು, ಹುಟ್ಟು-ಸಾವು, ಪ್ರೀತಿ-ದ್ವೇಷ ಸರ್ವೇ ಸಾಮಾನ್ಯ. ಇಂತಹ ಪ್ರಬಲ ಆಂತರ್ಯ ಸ್ಥಾಯಿಭಾವದ ಸಂದರ್ಭದಲ್ಲಿ ಕಣ್ಣೀರು ಸಹಜ. ಕರುಣಾ ಸಾಗರನಾದ ಪರಮಾತ್ಮ ಕರುಣೆಯಿಂದ ಕರುಣಿಸಿರುವ ಭಾವ ಮತ್ತು ಭಾವನೆಯೇ ಕಣ್ಣೀರು ಎಂದರು.
    ಅಶ್ರುಭಾವವು ಧರ್ಮ, ಜಾತಿ, ಮತ, ಪಂಥವನ್ನು ಮೀರಿರುವಂತಹದ್ದು. ನಮ್ಮ ಬದುಕಿನಲ್ಲೋ ಅಥವಾ ಮತ್ತೊಬ್ಬರ ಜೀವನದಲ್ಲೋ ನಡೆಯುವ ನೋವು, ಆಂಕ್ರದನಗಳಿಗೆ ನಮ್ಮ ಹೃದಯ ಮಿಡಿಯುತ್ತದೆ. ಇದು ದೇವರು ಬೆಸೆದಿರುವ ಮಾನವೀಯ ಸಂಬಂಧ. ಭಗವಂತನ ಸನ್ನಿಧಿಯಲ್ಲಿ ನಮ್ಮ ದುಖಃ, ದುಮ್ಮಾನವನ್ನು ಹೇಳಿಕೊಳ್ಳುವಾಗ ಅಳುವಿನ ಭಾವನೆ ಬಂದರೆ ಅದನ್ನು ತಡೆಯಬಾರದು. ಎಂತಹ ಸಂದರ್ಭದಲ್ಲೂ ಭಗವಂತನ ನಾಮಸ್ಮರಣೆ ಕೈಬಿಡಬಾರದು ಎಂದರು.
    ಭಗವಂತನ ಒಲುಮೆಗೆ ಭಜನೆ ಪವಿತ್ರ ಮಾರ್ಗ. ಭಜನೆ ಮೂಲಕ ಭಗವಂತನ ನಾಮಸ್ಮರಣೆಯಾಗುತ್ತದೆ. ಮನಸ್ಸಿಗೆ ಶಾಂತಿ ದೊರೆಯುತ್ತದೆ. ಅಲ್ಲದೆ ನಾವು ಸಂಕಲ್ಪ ಮಾಡಿಕೊಂಡ ಕಾರ್ಯಗಳು ಸಿದ್ಧಿಸುತ್ತವೆ. ಆದರೆ ಭಜನೆ ಮಾಡುವಾಗ ಭಗವಂತನ ಮೇಲೆ ನಂಬಿಕೆ ಇರಬೇಕೆಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts