ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತಗಟ್ಟೆ ಅಧಿಕಾರಿ(BLO) ಕಾರ್ಯದಿಂದ ಮುಕ್ತಿಗೊಳಿಸುವ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿಗೆ ಸಂಘದ ವತಿಯಿಂದ ಪತ್ರ ಬರೆಯಲಾಗಿದೆ.
ಈ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ವಿನಂತಿಸಿದೆ.
ಪತ್ರದಲ್ಲಿ ಏನಿದೆ?
ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತಗಟ್ಟೆ ಅಧಿಕಾರಿಯಾಗಿ ನೇಮಕ ಮಾಡಿದ್ದು, ಈಗಾಗಲೇ 2023ರ ವಿಧಾನಸಭೆ ಚುನಾವಣಾ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ, ಚುನಾವಣೆ ಮುಗಿದ ಬಳಿಕ ಒಂದು ತಿಂಗಳ ಕಾಲ ಮನೆ ಮನೆ ಸಮೀಕ್ಷೆ ಮಾಡಲು ಆದೇಶಿಸಿದ್ದು, ಇದು ಶಿಕ್ಷಕ ಸಮುದಾಯದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ: ಸಿನಿಮಾಗಳಿಂದ ಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಹೆಚ್ಚು ಪ್ರಭಾವಿತರಾಗುತ್ತಿದ್ದಾರೆ: ಅಲಹಾಬಾದ್ ಹೈಕೋರ್ಟ್
ಏಕೆಂದರೆ ಶಾಲೆಗಳು ಬೆಳಗ್ಗೆ 8 ಘಂಟೆ ಸುಮಾರಿಗೆ ಶುರುವಾಗಲಿದ್ದು, ಸಂಜೆ 4:00ಕ್ಕೆ ಮುಗಿಯಲಿದೆ. ಶಿಕ್ಷಕರು ಇದಕ್ಕಾಗಿ ಬೆಳಗ್ಗೆ 7:30ರ ಸುಮಾರಿಗೆ ಮನೆಯಿಂದ ಹೊರಡಬೇಕಿದ್ದು, ಸಂಜೆ 5:30ಕ್ಕೆ ವಾಪಸ್ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಅವಧಿ ಮುಗಿದ ನಂತರ ಮನೆ ಮನೆ ಸಮೀಕ್ಷೆ ಮಾಡಬೇಕೆಂಬ ಆದೇಶದಿಂದಾಗಿ ಮಹಿಳಾ ಶಿಕ್ಷಕಿಯರಲ್ಲಿ ಆತಂಕ ಉಂಟಾಗಿದೆ.
ಈ ಆದೇಶ ಶಿಕ್ಷಕರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಸರ್ಕಾರದ ಆದೇಶಕ್ಕೆ ಧಕ್ಕೆ ಉಂಟಾಗಲಿದೆ. ಆದ್ದರರಿಂ ಶಿಕ್ಷಕರನ್ನು BLO ಕಾರ್ಯದಿಂದ ಮುಕ್ತಿಗೊಳಿಸಬೇಕೆಂದು ಸಂಘದ ವತಿಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ.