ಲಖನೌ: ಏಕಕಾಲಕ್ಕೆ ವಿವಿಧ ಜಿಲ್ಲೆಗಳ 25 ಶಾಲೆಗಳಲ್ಲಿ ಕೆಲಸ ಮಾಡಿ, 13 ತಿಂಗಳವರೆಗೆ 1 ಕೋಟಿ ರೂ. ವೇತನ ಪಡೆದಿದ್ದಾಳೆ ಎನ್ನಲಾದ ಉತ್ತರ ಪ್ರದೇಶದ ಶಿಕ್ಷಕಿಯ ಅಸಲಿಯತ್ತು ಇದೀಗ ಬಹಿರಂಗವಾಗಿದೆ. ಪೊಲೀಸ್ ವಿಚಾರಣೆ ವೇಳೆ ಆ ಶಿಕ್ಷಕಿಯ ಹೆಸರು ಅನಾಮಿಕಾ ಶುಕ್ಲಾ ಅಥವಾ ಅನಾಮಿಕಾ ಸಿಂಗ್ ಅಲ್ಲ. ಬದಲಿಗೆ ಫರುಕ್ಕಾಬಾದ್ನ ಕೈಮ್ಗಂಜ್ನ ನಿವಾಸಿ ಪ್ರಿಯಾ ಎಂಬುದು ಗೊತ್ತಾಗಿದೆ.
ಪ್ರಿಯಾ, ಗೋಂಡಾದ ರಘುಕುಲ್ ಪದವಿ ಕಾಲೇಜಿನಲ್ಲಿ ಇನ್ನೂ ಬಿ.ಇಡಿ ವಿದ್ಯಾರ್ಥಿನಿ ಎಂಬುದು ಖಚಿತವಾಗಿದೆ. ಶಿಕ್ಷಕಿಯಾಗಿ ನೇಮಕಗೊಳ್ಳುವ ಅರ್ಹತೆ ಇಲ್ಲದಿದ್ದರೂ ಆಕೆ ಮೈನ್ಪುರಿಯ ಮಧ್ಯವರ್ತಿಯೊಬ್ಬರಿಗೆ 5 ಲಕ್ಷ ರೂ. ಹಣ ಕೊಟ್ಟು ಅನಾಮಿಕಾ ಶುಕ್ಲಾ ಎಂಬಾಕೆಯ ಹೆಸರಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಳು ಎಂಬುದು ಬಹಿರಂಗವಾಗಿದೆ.
ಹಗರಣ ಬಯಲಾದ ನಂತರ ಅನಾಮಿಕಾ ಸಿಂಗ್ ಅಲಿಯಾಸ್ ಅನಾಮಿಕಾ ಶುಕ್ಲಾ ತನ್ನ ರಾಜೀನಾಮೆ ಪತ್ರವನ್ನು ಮೂಲ ಶಿಕ್ಷಣ ಅಧಿಕಾರಿ (ಬಿಎಸ್ಎ) ಅಂಜಲಿ ಅಗರ್ವಾಲ್ ಎಂಬುವರಿಗೆ ಶನಿವಾರ ಕೊಡಲು ಬಂದಾಗ ಪೊಲೀಸರು ಆಕೆಯನ್ನು ಬಂಧಿಸಿದ್ದರು.
ಪೊಲೀಸರ ವಿಚಾರಣೆಯ ವೇಳೆ ತನ್ನ ಹೆಸರು ಅನಾಮಿಕಾ ಸಿಂಗ್ ತಂದೆ ಸುಭಾಷ್ ಸಿಂಗ್ ಎಂದು, ಅನಾಮಿಕಾ ಶುಕ್ಲಾ ತಂದೆ ಸುಭಾಷ್ ಚಂದ್ರ ಶುಕ್ಲಾ ಎಂದು ಹೇಳುತ್ತಲೇ ಇದ್ದಳು. ಆದರೆ ವಿಚಾರಣೆ ತೀವ್ರಗೊಳ್ಳುತ್ತಲೇ ತನ್ನ ನಿಜವಾದ ಹೆಸರು ಪ್ರಿಯಾ ಎಂದು ತಿಳಿಸಿದಳು ಎನ್ನಲಾಗಿದೆ. ಈ ಬಗ್ಗೆ ಪರಿಶೀಲಿಸಿದಾಗ ಆಕೆಯ ನಿಜವಾದ ಹೆಸರು ಪ್ರಿಯಾ. ಈಕೆ ಫರುಕ್ಕಾಬಾದ್ ಜಿಲ್ಲೆಯ ಕೈಮ್ಗಂಜ್ನ ಲಖನ್ಪುರ ಗ್ರಾಮದ ನಿವಾಸಿ ಮಹಿಪಾಲ್ ಎಂಬುವರ ಪುತ್ರಿ ಎಂಬುದು ಖಚಿತಪಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಸುಂದರಿಯನ್ನು ಮಂಚಕ್ಕೆ ಕರೆದಿದ್ದರಂತೆ…!
ಈಕೆಯಿಂದ 5 ಲಕ್ಷ ರೂಪಾಯಿ ಹಣ ಪಡೆದ ಮಧ್ಯವರ್ತಿ ಅನಾಮಿಕಾ ಶುಕ್ಲಾ ಎಂಬುವರ ಶೈಕ್ಷಣಿಕ ದಾಖಲೆಗಳನ್ನು ಬಳಸಿಕೊಂಡು ಈಕೆಗೆ ಫರೀದ್ಪುರದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ನೇಮಕಾತಿ ಪತ್ರ ಕೊಡಿಸಿದ್ದ ಎನ್ನಲಾಗಿದೆ. ಇಲ್ಲಿ ಆಕೆ 2018ರ ಆಗಸ್ಟ್ನಿಂದ ಕರ್ತವ್ಯ ನಿರ್ವಹಿಸುತ್ತಿದ್ದಳು ಎಂದು ತಿಳಿಸಿದ್ದಾರೆ.
ಮಧ್ಯವರ್ತಿಗಾಗಿ ಶೋಧ: ಅನಾಮಿಕಾ ಶುಕ್ಲಾ ಎಂಬಾಕೆಯ ಶೈಕ್ಷಣಿಕ ದಾಖಲೆಗಳನ್ನು ನಕಲು ಮಾಡಿ ಪ್ರಿಯಾಗೆ ಕೆಲಸ ಕೊಡಿಸಿದ ಮಧ್ಯವರ್ತಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲದೆ, ಶಿಕ್ಷಕಿಯಾಗುವ ಅರ್ಹತೆಯುಳ್ಳ ಶೈಕ್ಷಣಿಕ ದಾಖಲಾತಿಗಳನ್ನು ಹೊಂದಿರುವ ನಿಜವಾದ ಅನಾಮಿಕಾ ಶುಕ್ಲಾಳಿಗಾಗಿಯೂ ಶೋಧಿಸಲಾಗುತ್ತಿದೆ. ಆದರೆ, ಇದುವರೆಗೂ ಆಕೆ ಯಾರು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಪ್ರಕಾರ ಅಂಬೇಡ್ಕರ್ನಗರ, ಭಾಗ್ಪತ್, ಅಲಿಗಢ, ಶಹರಾನ್ಪುರ ಮತ್ತು ಪ್ರಯಾಗ್ರಾಜ್ ಜಿಲ್ಲೆಗಳ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಅನಾಮಿಕಾ ಶುಕ್ಲಾ ಹೆಸರಿನ ಐವರು ಶಿಕ್ಷಕರು ಇದ್ದಾರೆ. ಇವರೆಲ್ಲ ಯಾರು? ಪ್ರಿಯಾಳೇ ಆ ಹೆಸರಿನಲ್ಲೂ ವೇತನ ಪಡೆದಿದ್ದಾಳಾ ಎಂಬುದನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಗೊಂದು ಶಾಲೆ: ದುರ್ಬಲ ವರ್ಗದ ಬಾಲಕಿಯರ ಸಬಲೀಕರಣಕ್ಕೆ ಶಿಕ್ಷಣ ಒದಗಿಸುವ ಯೋಜನೆಯಡಿ ಉತ್ತರ ಪ್ರದೇಶ ಸರ್ಕಾರ ಜಿಲ್ಲೆಗೆ ಒಂದರಂತೆ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯವನ್ನು ಆರಂಭಿಸಿದೆ. ಈ ಶಾಲೆಗಳಿಗೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಿಕೊಂಡು, ತಿಂಗಳಿಗೆ 30 ಸಾವಿರ ರೂ. ವೇತನ ಪಾವತಿಸಲಾಗುತ್ತದೆ.