ಚೌಳಹಿರಿಯೂರು: ಇಂದು ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದರೆ ಮುಂದೆ ತಂದೆ-ತಾಯಿ ತಮ್ಮ ಮುಪ್ಪಿನ ಕಾಲದಲ್ಲಿ ವೃದ್ಧಾಶ್ರಮ ಸೇರುವುದು ಖಚಿತ ಎಂದು ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಮಹೇಶ್ವರ ಗದ್ದುಗೆ ಮತ್ತು ದೇವಾಲಯ ಮಂದಿರ ಲೋಕಾರ್ಪಣೆ, ಸರ್ವ ಶರಣರ ಸಮ್ಮೇಳನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಬದಲು ಬುದ್ದಿವಂತರನ್ನಾಗಿ ಮಾಡಬೇಕು. ನಾವು ಇಂದಿಗೂ ಅಗೋಚರ ಶಕ್ತಿಯನ್ನು ದೈವ ಎಂದು ಪೂಜಿಸುತ್ತಿದ್ದೇವೆ ಎಂದರು.
ಬೀರೂರಿನ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾ ಸ್ವಾಮೀಜಿ ಆಶೀವರ್ಚನ ನೀಡಿ, ಭಾರತೀಯ ಪರಂಪರೆಯಿಂದ ಬಂದ ಧಾರ್ಮಿಕ ಕಾರ್ಯಕ್ರಮಗಳು ಜಾತ್ರಾ ಮಹೋತ್ಸವಗಳು, ಹಬ್ಬ-ಹರಿದಿನಗಳು ಆಚರಿಸುವುದನ್ನು ಮುಂದುವರಿಸದಿದ್ದರೆ ಮಾನವರ ಬದುಕು ಅಧೋಗತಿಯತ್ತ ಸಾಗುತ್ತದೆ. ನಾನು ಮತ್ತು ನನ್ನಿಂದ ಎಂಬುದನ್ನು ಮರೆತು ಇಂತಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.