ಬೆಳಗಾವಿ: ಇಲ್ಲೊಬ್ಬ ಚಹಾ ಅಂಗಡಿ ಮಾಲೀಕನಿಗೆ ಅದೃಷ್ಟ ಖುಲಾಯಿಸಿದೆ! ಹೇಗೆ ಅಂತೀರಾ? ಚಹಾ ಅಂಗಡಿಯವನಿಗೆ ‘ಸ್ಟಾರ್’ ಕುದುರಿದ್ದು ಸಚಿನ್ ತೆಂಡೂಲ್ಕರ್ನಿಂದ..!
ಆಗಿದ್ದು ಇಷ್ಟು… ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿರುವ ಪೌಜಿ ಚಹಾ ಅಂಗಡಿಗೆ ಬಂದು, ಜಸ್ಟ್ ಒಂದು ಟೀ ಕುಡಿದು ಹೋದರು. ಅದಾಗಿದ್ದೇ ತಡ… ಪೌಜಿ ಚಾಯ್ ಅಂಗಡಿಯ ವ್ಯಾಪಾರ ದುಪ್ಪಟ್ಟಾಗಿದೆ.
ಚಾಯ್ ಅಂಗಡಿಯವನಿಗೆ ಡಬಲ್ ಧಮಾಕಾ ಆಗಿದ್ದು ಅಕ್ಟೋಬರ್ 31ರಂದು. ಆ ದಿನ ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರದಿಂದ ಕುಟುಂಬ ಸಮೇತ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಮಹಾರಾಷ್ಟ್ರ-ಗೋವಾ ರಸ್ತೆ ಮಾರ್ಗದಲ್ಲಿರುವ ಪೌಜಿ ಚಹಾ ಅಂಗಡಿಗೆ ಭೇಟಿ ನೀಡಿದ್ದರು. ಬಿಸ್ಕತ್ ಜತೆ ಚಹಾ ರುಚಿ ಸವಿದು ನಗು ಬೀರಿದ್ದರು. ಈ ದೃಶ್ಯಗಳು ಸೋಷಿಯಲ್ ಮೀಡಿಯಾ ತುಂಬ ಹರಿದಾಡಿದವು.
ಆ ನಂತರವೇ ಪೌಜಿ ಚಹಾ ಅಂಗಡಿಗೆ ಲಕ್ ಖುಲಾಯಿಸಿದ್ದು. ಸಚಿನ್ ಭೇಟಿಯ ನಂತರ ಅದೇ ಅಂಗಡಿಗೆ ಬರುವ ಜನ ಹೆಚ್ಚಾಗತೊಡಗಿದ್ದಾರೆ. ಬಂದ ಜನರು, ಚಹಾ ಕುಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಚಹಾ ಅಂಗಡಿಯವನ ವ್ಯಾಪಾರ ಡಬಲ್ ಧಮಾಕಾದಂತೆ ದುಪ್ಪಟ್ಟಾಗಿದೆ.