ಕುಷ್ಟಗಿ: ತಾಲೂಕಿನ ತಳುವಗೇರಾ ಗ್ರಾಮದ ಸಮಾನ ಮನಸ್ಕ ಯುವಕರು, ಬಿಸಿಲಿಗೆ ಒಣಗುತ್ತಿರುವ ಗಿಡಗಳಿಗೆ ನೀರುಣಿಸುವುದರ ಜತೆಗೆ ಪಕ್ಷಿಗಳಿಗೆ ಕಾಳುಕಡಿ ಹಾಕುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೇಸಿಗೆ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಜಲಮೂಲಗಳು ಬತ್ತಿ ಹೋಗುತ್ತಿರುವುದರಿಂದ ಪಕ್ಷಿಗಳೂ ಜಲದಾಹ ತೀರಿಸಿಕೊಳ್ಳಲು ಪರದಾಡುವಂತಾಗಿದೆ. ಇದನ್ನು ಮನಗಂಡ ತಳುವಗೇರಾದ ಪ್ರಶಾಂತ ಹವಾಲ್ದಾರ್, ಶಿವು ಪಟ್ಟೇದ್, ಚನ್ನಪ್ಪ ಮರೇಗೌಡ, ಆಕಾಶ ಮೇಳಿ, ಶ್ರೀಶೈಲ ಪಾಟೀಲ್, ಮಹಾಂತೇಶ ಕೊಪ್ಪದ್ ಸೇರಿದಂತೆ 11ಯುವಕರು ಸ್ವಯಂಪ್ರೇರಿತರಾಗಿ, ನೀರುಣಿಸಲು ಕಾರ್ಯೋನ್ಮುಖರಾಗಿದ್ದಾರೆ. ಶಾಲೆ ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಗಿಡಗಳಿಗೆ ಟ್ರ್ಯಾಕ್ಟರ್ ಟ್ಯಾಂಕರ್ ಸಹಾಯದಿಂದ ನೀರುಣಿಸುತ್ತಿದ್ದಾರೆ. ಅಲ್ಲಲ್ಲಿ ಗಿಡಗಳಿಗೆ ಬಟ್ಟಲು ನೇತು ಹಾಕಿ ಪಕ್ಷಿಗಳಿಗೆ ಕಾಳು ಹಾಗೂ ನೀರಿಡುತ್ತಿದ್ದಾರೆ.