ತಾಳಿಕೋಟೆ : ಪಟ್ಟಣದ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಂದಾಯ ಮತ್ತು ಪೊಲೀಸರ ತಂಡ ಶುಕ್ರವಾರ ದಾಳಿ ನಡೆಸಿ 25 ಸಾವಿರ ರೂ. ಮೌಲ್ಯದ 7 ಬ್ರಾಸ್ ಮರಳನ್ನು ವಶಕ್ಕೆ ಪಡೆದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿಯಿಂದ ತಾಳಿಕೋಟೆ ಪಟ್ಟಣದ ಕಡೆಗೆ ಅಕ್ರಮವಾಗಿ ಮರಳು ತುಂಬಿದ ಟಿಪ್ಪರ್ ಬರುವ ಕುರಿತು ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳಿಗೆ ನಿಖರ ಮಾಹಿತಿ ಸಿಕ್ಕಿತ್ತು. ಇದನ್ನು ಆಧರಿಸಿ ಪೊಲೀಸರ ನೆರವಿನೊಂದಿಗೆ ಟಿಪ್ಪರ್ ಬರುವ ಮಾರ್ಗದಲ್ಲಿ ಕಾಯ್ದಿದ್ದಾರೆ. ನಂತರ ಟಿಪ್ಪರ್ ಬರುವುದನ್ನು ಅರಿತ ಅಧಿಕಾರಿಗಳು ಕೈ ಮಾಡಿ ನಿಲ್ಲಿಸಿದ್ದಾರೆ.
ದೂರದಲ್ಲಿ ಟಿಪ್ಪರ್ ನಿಲ್ಲಿಸಿದ ಚಾಲಕ ಪರಾರಿಯಾಗಿದ್ದು, ಅಕ್ರಮ ಮರಳು ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ದಾಳಿಯಲ್ಲಿ ಕಂದಾಯ ನಿರೀಕ್ಷಕ ಎಸ್.ಎಚ್.ಹಾರಿವಾಳ, ಗ್ರಾಮ ಲೆಕ್ಕಾಧಿಕಾರಿ ಎಂ.ಕೆ.ಬಿರಾದಾರ ಪಾಲ್ಗೊಂಡಿದ್ದರು. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.