ಗುಂಡ್ಲುಪೇಟೆ: ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ನೆರವಿಗೆ ಮುಂದಾಗಿರುವ ಸರ್ಕಾರ ತಾಲೂಕು ಮಟ್ಟದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಿದ್ದು ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಎಂ.ಗಣೇಶ್ಪ್ರಸಾದ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ತಾಂತ್ರಿಕ ಕಾರಣಗಳಿಂದ ಕೇಂದ್ರ ತೆರೆಯುವುದು ಸ್ವಲ್ಪ ವಿಳಂಬವಾಗಿದ್ದರೂ ಬೆಳೆಗಾರರ ನೋಂದಣಿ ಮಾಡಿಕೊಳ್ಳಲಾಗಿದೆ. ಖರೀದಿಸಿದ ಒಂದು ವಾರದ ಅವಧಿಯಲ್ಲಿ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಳೆಯ ಅಭಾವದಿಂದ ವಿದ್ಯುತ್ ಉತ್ಪಾದನೆಯ ಕೊರತೆಯಿಂದ ಸರಬರಾಜಿನಲ್ಲಿ ಕಡಿತ ಉಂಟಾಗುತ್ತಿದ್ದು ರೈತರಿಗೆ ತೊಂದರೆಯಾಗಿರುವ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿ ಕನಿಷ್ಠ ಐದು ಗಂಟೆಯಾದರೂ ಪೂರೈಸುವಂತೆ ಒತ್ತಾಯಿಸಲಾಗಿದೆ. ನೆರೆ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದ್ದು ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಸುವ ನಿರೀಕ್ಷೆಯಿದೆ. ತಾಲೂಕನ್ನು ಸಾಧಾರಣ ಬರಪೀಡಿತ ಎಂದು ಪರಿಗಣಿಸಿದ್ದರೂ ಮತ್ತೆ ವಾಸ್ತವ ವರದಿ ಪಡೆದು ಬರಪೀಡಿತ ಪಟ್ಟಿಗೆ ಸೇರಿಸಿದ್ದು ಎಲ್ಲ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ರಮೇಶ್ಬಾಬು, ಎಪಿಎಂಸಿ ನಿರ್ದೇಶಕರಾದ ಪಿ.ಮಹದೇವಪ್ಪ, ಆರ್.ಎಸ್.ನಾಗರಾಜು, ಎಂ.ವಿರೂಪಾಕ್ಷ, ಎಚ್.ಬಿ.ನಾಗರಾಜು, ಬಸವರಾಜಪ್ಪ, ರಾಜು, ಕಾರ್ಯದರ್ಶಿ ಶ್ರೀಧರ್, ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಸಂಪತ್ತು, ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟದ ನಾಗಾರ್ಜುನಕುಮಾರ್ ಸೇರಿದಂತೆ ಹಲವರು ಇದ್ದರು.