ಶಿವಮೊಗ್ಗ: ನಗರದ ಭಗವಾನ್ ಆಶ್ರಮ ಧ್ವಂಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಲೆನಾಡ ಕೇಸರಿ ಪಡೆ ವತಿಯಿಂದ ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮೀನಾಕ್ಷಿ ಭವನದ ಹಿಂಭಾಗದಲ್ಲಿರುವ ಭಗವಾನ್ ಆಶ್ರಮ ಅವಧೂತ ಪರಂಪರೆಗೆ ಸೇರಿದೆ. ಇದು ಜನರ ಶ್ರದ್ಧಾ ಕೇಂದ್ರವಾಗಿದೆ. ಅನೇಕ ತಲೆಮಾರುಗಳಿಂದ ಈ ಜಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸತ್ಸಂಗ, ದತ್ತ ಜಯಂತಿಗೆ ಸಾವಿರಾರು ಮಂದಿ ಆಗಮಿಸುತ್ತಿದ್ದರು. ಈ ಶ್ರದ್ಧಾ ಕೇಂದ್ರವು ಶಿಥಿಲಾವಸ್ಥೆಯಲ್ಲಿತ್ತು. ಮಳೆಗಾಲದ ಸಂದರ್ಭದಲ್ಲಿ ಬೀಳುವ ಹಂತದಲ್ಲಿದ್ದಾಗ ಆ ಜಾಗದ ಮುಂಭಾಗದಲ್ಲಿ ತಾತ್ಕಾಲಿಕ ಶೆಡ್ನಲ್ಲಿ ಗುರುಗಳ ಪಾದುಕೆಯನ್ನು ಪ್ರತಿಷ್ಠಾಪಿಸಿ ನಿತ್ಯವೂ ಪೂಜೆ ನಡೆಸಲಾಗುತ್ತಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದರು.
ನ.21 ರಂದು ಭೂಮಾಫಿಯಾದವರು, ಪಟ್ಟಭದ್ರ ಹಿತಾಸಕ್ತಿಗಳು ಏಕಾಏಕಿ ಒಂದು ತಂಡವಾಗಿ ಬಂದು ಗೂಂಡಾ ವರ್ತನೆ ತೋರಿದ್ದಾರೆ. ಈ ಜಾಗದ ಹಕ್ಕುದಾರಿಕೆ ನಮ್ಮ ಬಳಿ ಇದೆ ಎಂದು ಹೇಳುತ್ತ ಜೆಸಿಬಿ ಯಂತ್ರದಿಂದ ಆಶ್ರಮ ಧ್ವಂಸ ಮಾಡಿದ್ದಾರೆ. ಈ ಸಂಬಂಧ ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಿದರು.
ಮಲೆನಾಡು ಕೇಸರಿ ಪಡೆ ಅಧ್ಯಕ್ಷ ಎಸ್.ಜಿ.ಚಂದ್ರಶೇಖರ್, ಮಂಜುನಾಥ್, ಮಧು, ವಿಜಯ್, ಆರ್.ಮಂಜುನಾಥ ಇತರರಿದ್ದರು.