More

    ಡಾ.ಎಂ.ಚಿದಾನಂದಮೂರ್ತಿ ಹೆಸರಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಿ: ಮುಖ್ಯಮಂತ್ರಿಗೆ ನಾಗಾಭರಣ ಮನವಿ

    ಬೆಂಗಳೂರು: ಹಿರಿಯ ಸಂಶೋಧಕ, ಸಾಹಿತಿ, ಕನ್ನಡವನ್ನೇ ಕೇಂದ್ರವಾಗಿಟ್ಟುಕೊಂಡು ತಮ್ಮ ಜೀವನಪರ್ಯಂತ ಬಹು ಆಯಾಮಗಳಲ್ಲಿ ಕನ್ನಡ ನಾಡು ನುಡಿಗಳ ಉತ್ಕರ್ಷಕ್ಕೆ ಶ್ರಮಿಸಿದ ಡಾ.ಎಂ.ಚಿದಾನಂದಮೂರ್ತಿ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ಮನವಿ ಮಾಡಿದ್ದಾರೆ.

    ಕನ್ನಡ ಸಾರಸ್ವತ ಲೋಕದ ಅಸಾಮಾನ್ಯ ಸಾಧಕರಾಗಿದ್ದ ಡಾ.ಎಂ.ಚಿದಾನಂದಮೂರ್ತಿ ಭಾಷಾಶಾಸ್ತ್ರ, ಶಾಸನ ಶೋಧ, ಸಂಸ್ಕೃತಿ ಚಿಂತನೆ, ಛಂದಸ್ಸು, ಗ್ರಂಥ ಸಂಪಾದನೆ, ಜಾನಪದ ಅಧ್ಯಯನ ಹೀಗೆ ಹಲವು ಜ್ಞಾನಶಿಸ್ತುಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಶಾಸನಗಳನ್ನು ಇತಿಹಾಸದ ಆಕರವಾಗಿ ಮಾತ್ರ ಬಳಸುತ್ತಿದ್ದಾಗ ‘ಶಾಸನಗಳು ಒಂದು ಸಾಂಸ್ಕೃತಿಕ ಅಧ್ಯಯನ’ ಕೃತಿ ಮೂಲಕ ಶಾಸನಗಳನ್ನು ಸಾಹಿತ್ಯ-ಸಂಸ್ಕೃತಿಗಳ ಅಧ್ಯಯನಕ್ಕೂ ಆಕರವಾಗಿ ಬಳಸಬಹುದು ಎಂದು ಮೊದಲಿಗೆ ತೋರಿಸಿಕೊಟ್ಟವರು.

    ಒಂದು ಕಾಲದಲ್ಲಿ ಕರ್ನಾಟಕ ನೀಲಗಿರಿಯಿಂದ ನಾಸಿಕ್‌ವರೆಗೂ ವ್ಯಾಪಿಸಿತ್ತು ಎಂಬುದನ್ನು ಸಂಶೋಧನೆ ಮೂಲಕ ಸಾಬಿತುಪಡಿಸಿದವರು. ಗೋಕಾಕ್ ಚಳವಳಿ ಸಂದರ್ಭದಲ್ಲಿ ರೂಪುಗೊಂಡ ಸಾಹಿತಿಗಳ ಕಲಾವಿದರ ಬಳಗದ ಪ್ರಧಾನ ಸಂಚಾಲಕರಾಗಿ ಕನ್ನಡ ಹೋರಾಟಕ್ಕೆ ಅಗತ್ಯವಾಗಿದ್ದ ಘನತೆ-ಗಾಂಭೀರ್ಯ ತಂದುಕೊಟ್ಟವರು. ರಾಜ್ಯಮಟ್ಟದ ಮೊದಲ ಕನ್ನಡಪರ ಸಂಘಟನೆ ‘ಕನ್ನಡ ಶಕ್ತಿ ಕೇಂದ್ರ’ವನ್ನು ಸಂಘಟಿಸಿ, ಆ ಮೂಲಕ ನಡೆಸಿದ ಕನ್ನಡ ಚಳವಳಿ ಮೌಲಿಕವಾದದ್ದು. ‘ಸರೋಜಿನಿ ಮಹಿಷಿ ವರದಿ’, ‘ಕನ್ನಡ ವಿಶ್ವವಿದ್ಯಾಲಯ’, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’, ‘ಕಲ್ಯಾಣ ಕರ್ನಾಟಕ’, ಕಿತ್ತೂರು ಕರ್ನಾಟಕಗಳ ಹೆಸರು ಮುಂತಾದವು ಅವರ ಚಿಂತನೆಯ ಫಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಕರ್ನಾಟಕಕ್ಕೆ ದಕ್ಕಬೇಕಾದ ಹಲವು ಸೌಲಭ್ಯಗಳಿಗಾಗಿ ದನಿ ಎತ್ತಿ, ಆ ಕನಸುಗಳನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸವನ್ನು ಚಿದಾನಂದಮೂರ್ತಿ ಅವರು ಮಾಡಿದ್ದಾರೆ. ಹೀಗೆ ಬಹು ಆಯಾಮಗಳಲ್ಲಿ ನಾಡು-ನುಡಿಗೆ ಶ್ರಮಿಸಿದ ಅಪ್ರತಿಮ ಹೋರಾಟಗಾರ, ಕನ್ನಡ ಸಂಸ್ಕೃತಿ ಭಾರತೀಯ ಸಂಸ್ಕೃತಿಗಳ ನೈಜ ಆರಾಧಕ ಚಿದಾನಂದಮೂರ್ತಿಯವರ ಸಿದ್ಧಿ-ಸಾಧನೆಯನ್ನು ನಿರಂತರವಾಗಿ ತಿಳಿಸುವ ಕೆಲಸ ಆಗಬೇಕಿದೆ ಎಂದು ನಾಗಾಭರಣ ತಿಳಿಸಿದ್ದಾರೆ.

    ಕನ್ನಡವನ್ನೇ ಕೇಂದ್ರವಾಗಿಟ್ಟುಕೊಂಡು ತಮ್ಮ ಜೀವನ ಪರ್ಯಂತ ಬಹು ಆಯಾಮಗಳಲ್ಲಿ ಕನ್ನಡ ನಾಡು-ನುಡಿಗಳ ಉತ್ಕರ್ಷಕ್ಕೆ ಶ್ರಮಿಸಿ ಕನ್ನಡದ ಸ್ವಾತಿಕಶಕ್ತಿ ಎನಿಸಿದ್ದ ಡಾ.ಎಂ.ಚಿದಾನಂದಮೂರ್ತಿ ಕಣ್ಮರೆಯಾಗಿ 2 ವರ್ಷಗಳು ಕಳೆದಿದೆ. ಅವರ ಹೆಸರನ್ನು ಶಾಶ್ವತಗೊಳಿಸುವ ಅವರ ಕೆಲಸವನ್ನು ಮುಂದುವರಿಸುವ ಕೆಲಸ ಆಗಬೇಕೆಂದು ಕನ್ನಡಾಸಕ್ತರು ಪ್ರಾಧಿಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಕನ್ನಡ ಸಂಸ್ಕೃತಿ ಜಾಗೃತಿಯ ಅಧ್ಯಯನ ಕೆಲಸಗಳಿಗೆ ಮೀಸಲಾದ ಒಂದು ಅಧ್ಯಯನ ಕೇಂದ್ರವನ್ನು ಸ್ಥಾಪಿಸುವಂತೆ ಡಾ.ಟಿ.ಎಸ್.ನಾಗಾಭರಣ ಒತ್ತಾಯಿಸಿದ್ದಾರೆ.

    ಬೆಳಗಾವಿಯಿಂದ ಹೊರಟ ವಿಮಾನಕ್ಕೆ ಹಕ್ಕಿ ಡಿಕ್ಕಿ; ಇಂಜಿನ್ ಬ್ಲೇಡ್​ಗೆ ಹಾನಿ..

    ‘ನನ್ನ ಜೀವನದ ಕೊನೆಯ ಆಸೆ ಏನು ಗೊತ್ತಾ?’ ಎನ್ನುತ್ತಲೇ ಮಹತ್ವದ ವಿಚಾರವೊಂದನ್ನು ಹೇಳಿದ್ರು ಮಾಜಿ ಪ್ರಧಾನಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts