ತಿ.ನರಸೀಪುರ: ವಿದ್ಯಾರ್ಥಿ ದೆಸೆಯಿಂದಲೇ ಕಾನೂನು ಜ್ಞಾನ ಪಡೆಯುವುದು ಅಗತ್ಯ ಎಂದು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಜಿ.ಸಿ. ಪ್ರಶಾಂತ್ ಅಭಿಪ್ರಾಯಪಟ್ಟರು.
ತಾಲೂಕಿನ ಕೇತುಪುರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ ಹಾಗೂ ಸಂವಿಧಾನ ಸಂಸ್ಥಾಪನಾ ದಿನಾಚರಣಾ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನಿನ ಬಗ್ಗೆ ಅರಿವಿದ್ದಾಗ ನಾವು ತಪ್ಪು ಮಾಡುವುದಿಲ್ಲ. ತಪ್ಪು ಮಾಡಿದ ಮೇಲೆ ನಮಗೆ ಗೊತ್ತಿರಲಿಲ್ಲ ಎಂದರೆ ಕಾನೂನಿನಲ್ಲಿ ಕ್ಷಮೆ ಇಲ್ಲ. ಹೀಗಾಗಿ ಕನಿಷ್ಠ ಕಾನೂನಿನ ಅರಿವು ಅಗತ್ಯ. ವಿದ್ಯಾರ್ಥಿಗಳು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಅರಿವು ಹೊಂದಬೇಕು. ಸಮಾನತೆಯ ಹಕ್ಕು ಸೇರಿದಂತೆ ಬದುಕಲು ಅಗತ್ಯವಾದ ಎಲ್ಲ ಹಕ್ಕುಗಳನ್ನು ಪಡೆಯುವುದು ನಮ್ಮ ಕಾನೂನಿನಲ್ಲಿದೆ ಎಂದು ತಿಳಿಸಿದರು.
ವಕೀಲರಾದ ಸಿದ್ದರಾಜು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಉಪನ್ಯಾಸ ನಿಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಮಾತನಾಡಿದರು. ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಮಿಯಾ ಭಾನು, ಮುಖ್ಯಶಿಕ್ಷಕಿ ಲವೀನಾ ರೇಖಾ ಫರ್ನಾಂಡಿಸ್, ಎಸ್ಡಿಎಂಎಸ್ ಅಧ್ಯಕ್ಷ ಶಿವಸ್ವಾಮಿ, ಬಿಆರ್ಪಿ ಎಚ್.ಎಂ. ಶಂಕರ್, ವಕೀಲ ಉಮೇಶ್ ಕುಮಾರ್, ಮಾದಪ್ಪ ಹಾಗೂ ಶಿಕ್ಷಕರು ಹಾಜರಿದ್ದರು.