ಬೆಳಗಾವಿ: ಕರೊನಾ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಈಜುಕೊಳ ಮುಚ್ಚುವಂತೆ ಸರ್ಕಾರ ಈಚೆಗೆ ಹೊರಡಿಸಿರುವ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ನಗರದ ಈಜುಪಟುಗಳು, ತರಬೇತುದಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರೊನಾ ಹರಡುವಿಕೆ ನಿಯಂತ್ರಣಕ್ಕಾಗಿ 2020ರಲ್ಲಿ 9 ತಿಂಗಳ ಕಾಲ ಈಜುಕೊಳ ಬಂದ್ ಮಾಡಲಾಗಿತ್ತು. 2021ರ ಜ.1ರಿಂದ ಆರಂಭವಾದ ಈಜುಕೊಳದಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು, ಅಭ್ಯಾಸ ಕೈಗೊಳ್ಳುತ್ತಿದ್ದೆವು. ಈಚೆಗೆ ಬೆಂಗಳೂರಿನಲ್ಲಿ ಜರುಗಿದ 20ನೇ ನ್ಯಾಷನಲ್ ಪ್ಯಾರಾ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ 30 ಚಿನ್ನದ ಪದಕ ಗಳಿಸಿದ್ದೆವು. ಈಗ ಈಜುಕೊಳ ಮುಚ್ಚಿದ್ದರಿಂದ ಅಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಈಜುಪಟುಗಳು ಅಳಲು ತೋಡಿಕೊಂಡರು. ತರಬೇತುದಾರ ಉಮೇಶ ಕಲಘಟಗಿ ಮಾತನಾಡಿ, ಬೇಸಿಗೆಯಲ್ಲೇ ಈಜುಕೊಳಕ್ಕೆ ಬರುವವರ ಸಂಖ್ಯೆ ಅಧಿಕ. ಈ ಅವಧಿಯಲ್ಲೇ ಬಂದ್ ಮಾಡಿದರೆ, ಕೆಲಸ ಮಾಡುವವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಹೀಗಾಗಿ ಈಜುಕೊಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ರಾಘವೇಂದ್ರ ಅಣ್ವೇಕರ್, ಅಜಯ ಪೈ, ಮನೋಜ್ ಜಾಧವ, ಸುರೇಖಾ ಮಿಸಾಳೆ, ಕಲ್ಲಪ್ಪ ಪಾಟೀಲ, ಭರತ ಪಾಟೀಲ ಇದ್ದರು.