More

    ಸ್ವರ್ಣವಲ್ಲೀ ಶ್ರೀಗಳ ‘ಹಸಿರು’ ಕಾರ್ಯ ರಾಜ್ಯಕ್ಕೆ ಮಾದರಿ

    ಶಿರಸಿ: ಚಾತುರ್ಮಾಸ್ಯ ವೃತಾಚರಣೆ ಅವಧಿಯಲ್ಲಿ ಶಿಷ್ಯರಿಗೆ ವೃಕ್ಷ ಮಂತ್ರಾಕ್ಷತೆ ನೀಡುವ ಮೂಲಕ ಪ್ರತಿಯೊಬ್ಬ ಶಿಷ್ಯರಿಗೂ ವೃಕ್ಷ ಪೂಜೆ ಮಾಡಿ ಪರಿಸರ ಉಳಿಸಿ ಎಂಬ ಸಂದೇಶ ನೀಡುತ್ತಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ, ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಬಣ್ಣಿಸಿದರು.

    ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಪ್ರತೀ ಚಾತುರ್ಮಾಸ್ಯದಲ್ಲಿ ನಡೆಸಲಾಗುವ ವೃಕ್ಷ ಮಂತ್ರಾಕ್ಷತೆ ಅಭಿಯಾನದ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಹಸಿರು ಶ್ರೀಗಳು, ಹಸಿರು ಸ್ವಾಮೀಜಿ ಎಂದೇ ಹೆಸರಾದ ಸ್ವರ್ಣವಲ್ಲೀ ಶ್ರೀಗಳು ವಿವಿಧ ಜಾತಿಯ ವೃಕ್ಷಗಳನ್ನು ಶಿಷ್ಯರಿಗೆ ಮಂತ್ರಾಕ್ಷತೆ ಮೂಲಕ ನೀಡುವುದೇ ಒಂದು ವಿಶಿಷ್ಟ ಆಲೋಚನೆ.

    ಈ ಚಿಂತನೆ ಸಾಮಾನ್ಯ ಶಿಷ್ಯನಿಗೂ ಪರಿಸರದ ಮೇಲೆ ಕಾಳಜಿ ಮೂಡಿಸುವಂಥದ್ದು. ಶ್ರೀಗಳಿಂದ ಗಿಡ ಪಡೆದವರು ಅತ್ಯಂತ ಪ್ರೀತಿ ಹಾಗೂ ಪೂಜನೀಯ ಭಾವದಿಂದ ನೆಟ್ಟು ಬೆಳೆಸುತ್ತಾರೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಮಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು, ಈ ವೃಕ್ಷ ಮಂತ್ರಾಕ್ಷತಾ ಅಭಿಯಾನವನ್ನು ಕಳೆದ 15 ವರ್ಷಗಳ ನಡೆಸಲಾಗುತ್ತಿದ್ದು, ಈ ಬಾರಿ ಅರಣ್ಯ ಇಲಾಖೆ ಸಹಕಾರ ದೊಡ್ಡದಿದೆ.

    ಮಠಕ್ಕೆ ಬಂದ ಶಿಷ್ಯರಿಗೆ ಮಂತ್ರಾಕ್ಷತೆಯೊಂದಿಗೆ ಗಿಡಗಳನ್ನು ನೀಡುವುದು, ಆ ಮೂಲಕ ಸಮೃದ್ಧ ಹಸಿರನ್ನು ಹೆಚ್ಚಿಸುವುದು ನಮ್ಮ ಆಶಯವಾಗಿದೆ ಎಂದರು.

    ವೃಕ್ಷಲಕ್ಷ ಆಂದೋಲನದ ಅನಂತ ಅಶೀಸರ ಮಾತನಾಡಿ, 1994ರಿಂದ ಸ್ವರ್ಣವಲ್ಲೀ ಶ್ರೀಗಳು ವೃಕ್ಷಾರೋಪಣ ಅಭಿಯಾನ ನಡೆಸುತ್ತಿದ್ದಾರೆ. ರಾಜ್ಯದ ಹಲವಡೆ ವೃಕ್ಷಾರೋಪಣದಲ್ಲಿ ಪಾಲ್ಗೊಂಡು ವೃಕ್ಷ ಪ್ರೀತಿಯನ್ನು ಶಿಷ್ಯರು ಹಾಗೂ ಅಭಿಮಾನಿಗಳಲ್ಲಿ ಬೆಳೆಸುತ್ತಿದ್ದಾರೆ ಎಂದರು.

    ಮಠದ ಆಡಳಿತ ಮಂಡಳಿಯ ಆರ್.ಎಸ್. ಹೆಗಡೆ ಭೈರುಂಬೆ, ವ್ಯವಸ್ಥಾಪಕ ಆರ್.ಎನ್. ಭಟ್ಟ ಸುಗಾವಿ, ಸಸ್ಯಲೋಕದ ಪ್ರಮುಖ ಮಹಾಬಲೇಶ್ವರ ಗುಮ್ಮಾನಿ, ಶ್ರೀಪಾದ ರಾಯಸದ, ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts