More

    ಶರಣರ ವಿಚಾರ ಅನುಕರಣೀಯ

    ಬೆಳಗಾವಿ: ಶರಣರ ವಚನಗಳು ಸರ್ವಕಾಲಕ್ಕೂ ಪ್ರಸ್ತುತವೆನಿಸಿವೆ. ವಾಸ್ತವ ಬದುಕಿನಲ್ಲಿ ಅವುಗಳನ್ನು ಅನುಕರಿಸಿ ಆಚರಣೆಗೆ ತರುವುದು ಅತ್ಯಗತ್ಯ ಎಂದು ಪ್ರವಚನಕಾರ್ತಿ ಪ್ರೇಮಕ್ಕ ಅಂಗಡಿ ಹೇಳಿದರು.

    ನಗರದ ವೀರಶೈವ ಮಹಾಸಭೆಯು ಶಿವಬಸವನಗರದ ಲಿಂಗಾಯತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಶರಣರ ವಚನಗಳು ಅನುಭಾವ ವೇದ್ಯವೆನಿಸಿವೆ. ಬದುಕಿನ ಎಲ್ಲ ಸತ್ಯಗಳನ್ನು ವಚನಗಳಲ್ಲಿ ಅವಲೋಕಿಸಿದ್ದಾರೆ. ಜಾತಿ, ಮತ, ಪಂಥಗಳನ್ನು ಮೀರಿ ಬದುಕಿನ ನಿಜಧರ್ಮದ ಆಶಯಗಳನ್ನು ವ್ಯಕ್ತಪಡಿಸಿದ್ದಾರೆ. ಅವುಗಳನ್ನು ಅರಿಯುವ ಪ್ರಯತ್ನ ನಮ್ಮದಾಗಬೇಕು ಎಂದರು.

    ಶರಣರಲ್ಲಿ ಮಡಿವಾಳ ಮಾಚಿದೇವರ ನೂರಾರು ವಚನಗಳು ದೊರೆತಿದ್ದು, ಅಧ್ಯಾತ್ಮದ ಶಿಖರಗಳೆನಿಸಿವೆ. ಅಧ್ಯಾತ್ಮವು ಮನದ ಹಸಿವಿನ ರೂಪ. ಅದನ್ನು ಅನುಭಾವದ ನೆಲೆಯಲ್ಲಿ ಗಳಿಸಿಕೊಳ್ಳಬೇಕು. ಮನದ ಮಲತ್ರಯಗಳನ್ನು ಕಿತ್ತೊಗೆದು ಆತ್ಮಸಿದ್ಧಿ ಹೊಂದಿದಾಗ ಜೀವನದ ಅರ್ಥಸಂಪತ್ತು ಹೆಚ್ಚುವುದೆಂದು ಮಾಚಿದೇವರು ಅದ್ಭುತವಾಗಿ ಪ್ರತಿಪಾದಿಸಿದ್ದಾರೆ. ಬಸವಣ್ಣನವರು ಇಂತಹ ನೂರಾರು ಶರಣರಿಗೆ ಸಮಾಜದಲ್ಲಿ ಸ್ಥಾನ ಕಲ್ಪಿಸಿಕೊಡುವುದರ ಮೂಲಕ ಅವರ ಆಧ್ಯಾತ್ಮಿಕ ಉನ್ನತಿಯನ್ನು ಲೋಕಕ್ಕೆ ಪರಿಚಯಿಸಿದರು. ಬಸವಣ್ಣನವರು ಸರ್ವಸಮಾನತೆಯ ಸಮಾಜ ಕಟ್ಟಿದ್ದು ಇಂದಿನ ಮನ್ವಂತರಕ್ಕೆ ಪ್ರಸ್ತುತವೆನಿಸಿದೆ ಎಂದು ಅಭಿಪ್ರಾಯಪಟ್ಟರು.

    ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿ, ಮಹಾಮಾರಿ ಕರೊನಾ ಮನುಷ್ಯನಿಗೆ ತಕ್ಕ ಪಾಠ ಕಲಿಸಿದೆ. ದೇವರು-ಧರ್ಮ-ಅಧ್ಯಾತ್ಮವನ್ನು ಮರೆತ ಪ್ರತಿಲ ಹಾಗೂ ನವಜೀವನಶೈಲಿಯಿಂದ ನಾವೆಲ್ಲರೂ ಕಷ್ಟಪಡುವಂತಾಯಿತು. ಜೀವನದಲ್ಲಿ ಏನೆಲ್ಲ ಗಳಿಸಬಹುದು. ಆದರೆ, ಆತ್ಮಾನುಭಾವ ಗಳಿಸುವುದು ಕಷ್ಟ. ನಮ್ಮ ಮನೋವಿಕಾರಗಳಿಗೆ ಶರಣರ ವಚನಗಳು ದಿವ್ಯೌಷ. ಕರೊನಾ ನಂತರ ಜನತೆಗೆ ಅಧ್ಯಾತ್ಮದ ಹಸಿವು ಹೆಚ್ಚಾಗಿದೆ. ಜೀವನದಲ್ಲಿ ಹಣಗಳಿಸಬಹುದು. ಆದರೆ, ಅಧ್ಯಾತ್ಮದ ಹಸಿವು ನೀಗಿಸುವುದು ಕಷ್ಟ ಎಂಬುದು ಗೊತ್ತಾಗಿದೆ ಎಂದರು.

    ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಉಮಾ ಸಂಗೀತ ಶಾಲೆಯ ಮಂಗಲಾ ಮಠದ ಹಾಗೂ ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು. ಅಖಿಲ ಭಾರತ ವೀರಶೈವ ಮಹಾಸಭಾದ ವಧು-ವರರ ಅನ್ವೇಷಣಾ ಕೇಂದ್ರದ ಅಧ್ಯಕ್ಷ ಡಾ. ಎ್.ವಿ. ಮಾನ್ವಿ, ಹಿರಿಯ ವಕೀಲ ಎಂ.ಬಿ. ಝಿರಲಿ, ಜ್ಯೋತಿ ಬಾವಿಕಟ್ಟಿ, ಡಾ.ಗುರುದೇವಿ ಹುಲೆಪ್ಪನವರಮಠ, ಪ್ರೊ. ಎ.ಬಿ. ಕೊರಬು ಇತರರಿದ್ದರು. ವೀರಭದ್ರ ಅಂಗಡಿ ಹಾಗೂ ಆಶಾ ಯಮಕನಮರಡಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts