ಬೆಂಗಳೂರು: ಹಿರಿಯ ನಟ ಮತ್ತು ಪರಿಸರವಾದಿ ಸುರೇಶ್ ಹೆಬ್ಳಿಕರ್ ಇದೀಗ ಮಕ್ಕಳ ಚಿತ್ರದ ಮೂಲಕ ಆಗಮಿಸುತ್ತಿದ್ದಾರೆ. ಶ್ರೀ ಸಾಯಿ ಇಂಟರ್ನ್ಯಾಶನಲ್ ಫಿಲಂ ಬ್ಯಾನರ್ನಲ್ಲಿ ‘ಹಸಿರು ಮನ’ ಹೆಸರಿನ ಮಕ್ಕಳ ಚಿತ್ರ ನಿರ್ವಣವಾಗುತ್ತಿದ್ದು, ವಿಶೇಷ ಪಾತ್ರದಲ್ಲಿ ಸುರೇಶ್ ಹೆಬ್ಳಿಕರ್ ಕಾಣಿಸಿಕೊಳ್ಳಲಿದ್ದಾರೆ. ನ್ಯಾಯವಾದಿ ಮತ್ತು ಪರಿಸರವಾದಿಯಾಗಿರುವ ಎಸ್. ಉಮೇಶ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳು ಶುರುವಾಗಿವೆ. ನಿರ್ಮಾಣ ಮತ್ತು ಕಥೆ ಬರೆಯುವುದರ ಜತೆಗೆ ಶಿಕ್ಷಕನ ಪಾತ್ರದಲ್ಲಿಯೂ ಉಮೇಶ್ ನಟಿಸಲಿದ್ದಾರೆ.
ಶೈಕ್ಷಣಿಕ, ಸಾಮಾಜಿಕ ಮತ್ತು ಪರಿಸರ ಕಾಳಜಿವುಳ್ಳ ಕಥಾಹಂದರ ಹೊಂದಿರುವ ‘ಹಸಿರು ಮನ’ ಚಿತ್ರವನ್ನು ಚಿಕ್ಕಮಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣ ಮಾಡಲು ನಿರ್ವಪಕರು ನಿರ್ಧರಿಸಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಶೂಟಿಂಗ್ ಶುರುವಾಗಲಿದೆ. ಪುಟಾಣಿಗಳಾದ ಮೋಕ್ಷಶ್ರೀ, ಶ್ರಾವಣಿ, ನಿಧಿ, ಬೆನಕ ಮತ್ತು ಸಹನಾ ಚಿತ್ರದಲ್ಲಿ ಇರಲಿದ್ದಾರೆ.