ನವದೆಹಲಿ: ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರಿಂಕೋರ್ಟ್ ಬುಧವಾರ ಕೈಗೆತ್ತಿಕೊಳ್ಳಲಿದೆ.
ಸಿಎಎ ಪರ-ವಿರೋಧ ಬಣದಿಂದ ಉಂಟಾದ ಗಲಭೆ ಹಿಂಸಾಚಾರಕ್ಕೆ ತಿರುಗಿ 46 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಕಾರಣ ದ್ವೇಷ ಭಾಷಣ ಎಂದು ಆರೋಪಿಸಿ, ಯಾರೆಲ್ಲಾ ಪ್ರಚೋದಾನಾತ್ಮಕ ಭಾಷಣ ಮಾಡಿದ್ದಾರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚನೆ ನೀಡುವಂತೆ ಸಂತ್ರಸ್ತರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಈಶಾನ್ಯ ದೆಹಲಿಯ 10 ಮಂದಿ ಸಂತ್ರಸ್ತರು ಪಿಐಎಲ್ ದಾಖಲಿಸಿದ್ದಾರೆ. ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಸೇರಿದಂತೆ ದ್ವೇಷ ಭಾಷಣ ಮಾಡಿದವರ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಲು ಸೂಚಿಸಲು ಕೋರಿದ್ದಾರೆ.
ಇದಲ್ಲದೆ, ಗಲಭೆ ಸಂಬಂಧ ದೆಹಲಿ ಪೊಲೀಸರನ್ನು ಬಿಟ್ಟು ಹೊರ ರಾಜ್ಯದ ಪೊಲೀಸ್ ತನಿಖಾ ತಂಡದಿಂದ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಹಚ್ಚು ಗಲಭೆ ನಡೆದಿರುವ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೇನೆಯನ್ನು ನಿಯೋಜಿಸಬೇಕು. ಗಲಭೆಯಲ್ಲಿ ಪೊಲೀಸ್ ಪಾತ್ರ ಇರುವುದನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ವಿಚಾರಣಾ ಸಮಿತಿಯಿಂದ ತನಿಖೆ ನಡೆಸಬೇಕೆಂದು ಕೇಳಿಕೊಂಡಿದ್ದಾರೆ.
ಗಲಭೆಯನ್ನು ಉದ್ದೇಶಿಸಿ ವಕೀಲ ಕೊಲಿನ್ ಗೊನ್ಸಾಳ್ವೆ ಕಳೆದ ರಾತ್ರಿಯಲ್ಲೂ ಜನರು ಸಾವಿಗೀಡಾಗಿದ್ದಾರೆ. ಆದರೆ, ದೆಹಲಿ ನ್ಯಾಯಾಲಯ ಮಾತ್ರ ವಿಚಾರಣೆ ನಡೆಸಲು ವಿಳಂಬ ಮಾಡಿತು ಎಂದು ಆರೋಪಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಸಾಯಿರಿ ಎಂದು ಜನರಿಗೆ ನಾವು ಖಂಡಿತವಾಗಿ ಹೇಳುವುದಿಲ್ಲ. ಆದರೆ, ಈ ರೀತಿಯ ಒತ್ತಡವನ್ನು ನಿಭಾಯಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಗಲಭೆಯನ್ನು ನ್ಯಾಯಾಲಯ ತಡೆಯಲಿದೆ ಎಂಬ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕುತ್ತದೆ. ಆದರೆ, ಏನಾದರೂ ಸಂಭವಿಸಿದಾಗಲೇ ನಾವು ಮಧ್ಯಪ್ರವೇಶಿಸಲು ಸಾಧ್ಯವಾಗವುದು. ನಮ್ಮ ಅಧಿಕಾರದಲ್ಲಿ ಕೆಲ ಮಿತಿಗಳಿರುವುದನ್ನು ನಾವು ಅರಿತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಅರ್ಜಿಯಲ್ಲಿ ಸಂತ್ರಸ್ತರ ಶವಪರೀಕ್ಷೆಯ ವರದಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ. (ಏಜೆನ್ಸೀಸ್)