ಕಾರವಾರ: ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡವನಿಗೆ ಸರ್ಕಾರ ತುರ್ತು ಪರಿಹಾರ ನೀಡಿದೆ. ಆದರೆ, ಅದನ್ನು ಪಡೆಯಲು ಕುಟುಂಬದ ಯಾರೂ ಇಲ್ಲದ ಪರಿಸ್ಥಿತಿ ಉಂಟಾಗಿದೆ.
ಧಾರವಾಡ ಕೇಂದ್ರ ಕಾರಾಗೃಹದಲ್ಲಿ 2015ರಲ್ಲಿ ಆತ್ಮಹತ್ಯೆಗೆ ಶರಣಾದ ಕಾರವಾರ ಹರಿದೇವನಗರದ ವಿಚಾರಣಾಧೀನ ಕೈದಿ ರಾಘವೇಂದ್ರ ಅನಂತ ಗೌಡ ಎಂಬಾತನ ಕುಟುಂಬಕ್ಕೆ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ, ಅದನ್ನು ಪಡೆಯಲು ಆತನ ಕುಟುಂಬಸ್ಥರು ಯಾರೂ ಸಿಗುತ್ತಿಲ್ಲ. ಕುಟುಂಬಸ್ಥರು ಯಾರಾದರೂ ಇದ್ದಲ್ಲಿ ದಾಖಲೆಗಳೊಂದಿಗೆ ಸಂಪರ್ಕಿಸುವಂತೆ ಕಾರವಾರ ಜೈಲಿನ ಅಧಿಕಾರಿಗಳು ಪ್ರಕಟಣೆ ನೀಡಿದ್ದಾರೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 9480806459, 08382226347 ಗೆ ಸಂಪರ್ಕಿಸಬೇಕಾಗಿ ಮನವಿ ಮಾಡಿದ್ದಾರೆ.
ಘಟನೆ ಹಿನ್ನೆಲೆ: ಮೊದಲ ಗಂಡನನ್ನು ಬಿಟ್ಟು, ಪುಟ್ಟ ಮಗು ಹೊಂದಿದ್ದ ಶೀಲಾ ಎಂಬಾಕೆಯನ್ನು ಹಬ್ಬುವಾಡ ಹರಿದೇವನಗರದ ರಾಘವೇಂದ್ರ ಅನಂತ ಗೌಡ ವಿವಾಹವಾಗಿದ್ದ. ಇಬ್ಬರ ಸರಸ ಸಲ್ಲಾಪಕ್ಕೆ ಪುಟ್ಟ ಮಗು ಅತ್ತು ಅಡ್ಡಿ ಮಾಡುತ್ತದೆ ಎಂದು ಅದನ್ನು 2011ರಲ್ಲಿ ಗೋಡೆಗೆ ಹೊಡೆದು ಅಮಾನುಷವಾಗಿ ಕೊಂದು ಜೈಲು ಪಾಲಾಗಿದ್ದ. ಜೈಲಿನಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡ ಆತನನ್ನು ಧಾರವಾಡ ಮಾನಸಿಕ ಆಸ್ಪತ್ರೆಗೆ, ಅಲ್ಲಿಂದ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಆದರೆ, 2015ರ ಜುಲೈ 8ರಂದು ಆತ ಆತ್ಮಹತ್ಯೆಗೆ ಶರಣಾಗಿದ್ದ. ಆತನ ಪತ್ನಿ ಶೀಲಾ ಏನಾದಳು? ಎಂಬ ಮಾಹಿತಿ ಇಲ್ಲ.
ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನ್ಯಾಪ್! ಖಾರದ ಪುಡಿ ಎರಚಿ ಚಿತ್ರಹಿಂಸೆ…