ಹಿರೇಬಾಗೇವಾಡಿ : ಕಬ್ಬು ಕಟಾವು ಮಾಡಿ ಸಾಗಿಸಲು ಕೂಲಿ ಕಾರ್ಮಿಕರನ್ನು ನೇಮಿಸಬೇಕು ಎಂದು ಆಗ್ರಹಿಸಿ ಕಾಕತಿ ಮಾರ್ಕಂಡೇಯ ಕೋ ಆಪರೇಟಿವ್ ಶುಗರ್ ಮಿಲ್ ಲಿಮಿಟೆಡ್ ಕಾರ್ಯಾಲಯಕ್ಕೆ ರೈತರು ಶುಕ್ರವಾರ ಬೀಗ ಜಡಿದು ಪ್ರತಿಭಟಿಸಿದರು.
ರೈತ ಬಸವಣ್ಣೆಪ್ಪ ಗಾಣಗಿ ಮಾತನಾಡಿ, ಕಳೆದ ವರ್ಷ ಕಳುಹಿಸಿದ ಕಬ್ಬಿನ ಬಿಲ್ ಕೇಳುತ್ತಿಲ್ಲ. ಈ ವರ್ಷದ ಕಬ್ಬು ಸಾಗಿಸಲು ಕೂಲಿ ಕಾರ್ಮಿಕ ತಂಡವನ್ನು ನಮ್ಮ ಹೊಲಗಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕೆಂದು ಕೇಳುತ್ತಿದ್ದೇವೆ. ಮಾರ್ಕಂಡೇಯ ಕಾರ್ಖಾನೆ ಬೆಳೆಸುವ ನಿಟ್ಟಿನಲ್ಲಿ ಹಿರೇಬಾಗೇವಾಡಿಯ ರೈತರು ಹಲವರ ವಿರೋಧವಿದ್ದರೂ, ಕಳೆದ ವರ್ಷ ಬಿಲ್ ಬಗ್ಗೆ ಯೋಚಿಸದೆ ಕಬ್ಬು ಪೂರೈಸಿದ್ದಾರೆ ಎಂದರು.
ರೈತ ರಘು ಪಾಟೀಲ ಮಾತನಾಡಿ, ಈಗಾಗಲೇ ನಮ್ಮ ಹೊಲಗಳಲ್ಲಿ ಕೂಲಿ ಕಾರ್ಮಿಕರು ಬೀಡು ಬಿಟ್ಟಿದ್ದಾರೆ. ಹಿರೇಬಾಗೇವಾಡಿಯ ಎಲ್ಲ ಕಬ್ಬು ಸಾಗಿಸುವವರೆಗೂ ಅವರನ್ನು ನಾವು ಇಲ್ಲಿಂದ ಬಿಡುವುದಿಲ್ಲ. ಉಳ್ಳವರಿಗೆ ಮಾತ್ರ ಮಣೆ ಹಾಕದೆ ಪ್ರತಿಯೊಬ್ಬ ರೈತರನ್ನೂ ಸಮಾನವಾಗಿ ಕಾಣಬೇಕು ಎಂದರು.
ಶುಗರ್ ಮಿಲ್ ಕಾರ್ಯಾಲಯದ ಮುಖ್ಯಸ್ಥ ಮಲ್ಲಪ್ಪ, ಈಗಾಗಲೇ ಹಿರೇಬಾಗೇವಾಡಿಯಲ್ಲಿ ಒಂಬತ್ತು ಕಬ್ಬು ಕಟಾವು ಕಾರ್ಮಿಕ ತಂಡಗಳು ಬೀಡು ಬಿಟ್ಟಿವೆ. ಇನ್ನೂ ಹಲವು ತಂಡಗಳನ್ನು ಕರೆಸಿಕೊಳ್ಳಬೇಕು ಎಂದು ಸಿಬ್ಬಂದಿ ಆದೇಶಿಸಿದರು. ಇನ್ನೊಮ್ಮೆ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟು, ಕಾರ್ಯಾಲಯದ ಬೀಗ ತೆರೆದರು. ರಾಜು ಹಂಚಿನಮನಿ, ರಘು ಪಾಟೀಲ, ದಾನುಗೌಡ ಪಾಟೀಲ, ರಘು ವಾಲಿ, ಸಂಜು ಖನಗಾವಿ, ಬಸವರಾಜ ಹಿರೇಮಠ ಇತರರು ಇದ್ದರು.