ನವದೆಹಲಿ: ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅಧೀನ ಸಾಲ ನೀಡುವುದಕ್ಕೆ ನೂತನ ಯೋಜನೆಯೊಂದನ್ನು ತಯಾರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆಯಲ್ಲಿ ತಿಳಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಲ ಮರುರಚನೆ ಮಾಡಲು ಮಾರ್ಚ್ 31, 2021ರ ತನಕ ಕಾಲಾವಕಾಶ ಮಾಡಬೇಕು ಎಂದು ಹಣಕಾಸು ಸಚಿವೆ ಆರ್ಬಿಐಗೆ ನಿರ್ದೇಶನ ನೀಡಿದ್ದಾರೆ. ಕಳೆದ ವರ್ಷ 5 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಮರುರಚನೆ ಮಾಡಲು ಆರ್ಬಿಐ ಅವಕಾಶ ಮಾಡಿಕೊಟ್ಟಿದ್ದು 2020ರ ಮಾರ್ಚ್ 31ರ ತನಕ ಕಾಲಾವಕಾಶ ಕೊಟ್ಟಿತ್ತು. ಇದೀಗ ಅದರ ಕಾಲಾವಧಿಯನ್ನು ಒಂದು ವರ್ಷಗಳ ಕಾಲ ಹೆಚ್ಚಳ ಮಾಡಲಾಗಿದೆ.
ಎಮ್ಎಸ್ಎಮ್ಇಗಳಿಗೆ ಬ್ಯಾಂಕಿಂಗ್ ರಹಿತ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ) ನೀಡುವ ಇನ್ವಾಯ್ಸ್ ಹಣಕಾಸನ್ನು ವಿಸ್ತರಿಸುವ ಸಲುವಾಗಿ ಫ್ಯಾಕ್ಟರ್ ರೆಗ್ಯುಲೇಷನ್ ಆ್ಯಕ್ಟ್ 2011ಕ್ಕೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು. ಈ ಮೂಲಕ ಆರ್ಥಿಕ ಸುಸ್ಥಿರತೆಯನ್ನು ಹೆಚ್ಚಿಸಲಾಗುವುದು.
ಎಮ್ಎಸ್ಎಮ್ಇಗಳಲ್ಲಿ ಕಾರ್ಯವಾಹಿ ಬಂಡವಾಳ ಅತಿ ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಅವುಗಳಿಗೆ ಅಧೀನ ಸಾಲವನ್ನು ಒದಗಿಸುವ ಯೋಜನೆಯನ್ನು ಪರಿಚಯಿಸಲಾಗುವುದು. ಉದ್ಯಮಿಗಳಿಗೆ ನೀಡಲಾಗುವ ಈ ಸಾಲವನ್ನು ಅರೆ ಷೇರು ಎಂದು ಪರಿಗಣಿಸಲಾಗುವುದು ಮತ್ತು ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ಗಳಿಂದ ಗ್ಯಾರಂಟಿ ನೀಡಲಾಗುವುದು.
ಎಮ್ಎಸ್ಎಮ್ಇ ಉದ್ಯಮಿಗಳಲ್ಲಿ ವಿಳಂಬಿತ ಸಾಲದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಅಪ್ಲಿಕೇಶನ್ ಆಧಾರಿತ ಇನ್ವಾಯ್ಸ್ ಸಾಲವನ್ನು ನೀಡುವುದಾಗಿ ಹಣಕಾಸು ಸಚಿವೆ ತಿಳಿಸಿದ್ದಾರೆ.