ಚಿಕ್ಕೋಡಿ: ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಶಿಕ್ಷಕನನ್ನು ವಜಾ ಮಾಡಿದ್ರು ಎಂದು ವಿದ್ಯಾರ್ಥಿಗಳೇ ಧರಣಿ ಕೂತಿದ್ದಾರೆ. ಬಂಬಲಾಡ ಗ್ರಾಮದ ಗೌತಮ ಸಿದ್ದಾರ್ಥ ಫ್ರೌಡಶಾಲೆ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕರ ಪರವಾಗಿ ಧರಣಿ ಕೂತವರು.
ಈ ಹಿಂದೆ ಗಿರಿಮಲ್ಲ ಯಾದವಾಡ ಎಂಬ ಶಿಕ್ಷಕನನ್ನು ಶಾಲಾ ಮಂಡಳಿಯಿಂದ ವಜಾ ಮಾಡಲಾಗಿತ್ತು. ಈ ವಿಷಯ ಕೇಳಿದ ವಿದ್ಯಾರ್ಥಿಗಳು ಸಿಟ್ಟಿಗೆದ್ದಿದ್ದು ಪ್ರೌಢಶಾಲೆಯ ಮುಖ್ಯಶಿಕ್ಷಕಿ ಹಾಗೂ ಶಾಲಾಮಂಡಳಿ ವಿರುದ್ಧ ಧರಣಿ ಕೂತಿದ್ದಾರೆ.
ಈ ವಿದ್ಯಾರ್ಥಿಗಳು ಕತ್ತಲಾದರೂ ಮನೆಗೆ ತೆರಳದೇ ನಮಗೆ ನ್ಯಾಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳ ಒಗ್ಗಟ್ಟಿನ ಈ ನಡೆಗೆ ಬಂಬಲವಾಡದ ಗ್ರಾಮಸ್ಥರೂ ಬೆಂಬಲ ನೀಡಿದ್ದಾರೆ.
ಆದರೆ ವಿದ್ಯಾರ್ಥಿಗಳು ಧರಣಿ ಕೂತಿದ್ದ ಸಂದರ್ಭ ಪಾಟೀಲ್ ಎಂಬ ಗ್ರಾಮಸ್ಥ ಶಿಕ್ಷಕ ಯಾದವಾಡ ಮೇಲೆ ಹಲ್ಲೆ ನಡೆಸಿದ್ದಾರೆ. ಶಿಕ್ಷಕನ ಮೇಲೆ ಹಲ್ಲೆ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ. ಇದರಿಂದ ಪರಿಸ್ಥಿತಿ ಹತೊಟಿ ಮೀರಿಬಿಟ್ಟಿತು. ಈ ಮಾಹಿತಿ ಸಿಗುತ್ತಿದ್ದಂತೆಯೆ ಸ್ಥಳಕ್ಕಾಗಮಿಸಿದ ಚಿಕ್ಕೋಡಿ ಠಾಣಾ ವ್ಯಾಪ್ತಿಯ ಪೊಲೀಸರು.ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕಡೆಗೆ ಪೊಲೀಸರೇ ವಿದ್ಯಾರ್ಥಿಗಳಿಗೆ ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದಾರೆ .