ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ.
ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಟಿ.ಚಂದ್ರಶೇಖರಪ್ಪ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದ. ಅದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ಬಂದ ತಕ್ಷಣ ಆತನನ್ನು ಅಮಾನತು ಮಾಡುವ ಮೂಲಕ ಸೂಕ್ತ ಕ್ರಮ ತೆಗೆದುಕೊಂಡಿದ್ದರು.
ಈಗ ಇನ್ನೊಂದು ಸರ್ಕಾರಿ ಶಾಲೆಯಲ್ಲಿ ಎಡವಟ್ಟು ನಡೆದಿದೆ. ಶಾಲೆಯಲ್ಲಿ ಶಿಕ್ಷಕರೋರ್ವರು ವಿದ್ಯಾರ್ಥಿನಿಯ ಬಾಯಲ್ಲಿ ಪುಳಿಯೊಗರೆ ಎಂದು ಹೇಳಿಸಿ, ಆಕೆ ಹೇಳಲು ಸಾಧ್ಯವಾಗದಾಗ ಉಳಿದ ವಿದ್ಯಾರ್ಥಿಗಳು ನಗುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.
ಕಬ್ಬಿನಗದ್ದೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಿರ್ವಾಣಯ್ಯ ಒಂದನೇ ತರಗತಿ ವಿದ್ಯಾರ್ಥಿನಿಯಿಂದ ಪುಳಿಯೊಗರೆ ಎಂದು ಹೇಳಿಸುತ್ತಾರೆ. ಆದರೆ ಬಾಲಕಿಗೆ ಅದನ್ನು ಸರಿಯಾಗಿ ಹೇಳಲು ಬರುವುದಿಲ್ಲ. ನಾಲ್ಕೈದು ಬಾರಿ ಹೇಳಿಸಿದರೂ ಆಕೆಗೆ ಸಾಧ್ಯವಾಗದಾಗ ವಿದ್ಯಾರ್ಥಿಗಳೆಲ್ಲ ದೊಡ್ಡದಾಗಿ ನಗುತ್ತಾರೆ. ಶಿಕ್ಷಕರೂ ಕೂಡ ನಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಆದರೆ ವಿಡಿಯೋ ಮಾಡಿದ್ದು ಯಾರು ಎಂಬ ಪ್ರಶ್ನೆ ಹುಟ್ಟಿದೆ. ಅಲ್ಲಿ ಬೇರೆ ಶಿಕ್ಷಕರು ಇದ್ದರಾ? ಅಥವಾ ಅಷ್ಟು ಸಣ್ಣ ಮಕ್ಕಳು ಮೊಬೈಲ್ ತರುತ್ತಾರಾ? ಎಂಬ ಸಂದೇಹವು ಕಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ಪಿಂಗ್ ನಲ್ಲಿ ಶಾಲೆಯೊಂದರಲ್ಲಿ ಪದವೊಂದನ್ನು ಉಚ್ಛರಿಸಲು ಕಷ್ಟಪಡುತ್ತಿರುವ ಮಗುವಿನ ಆತಂಕದ ಮುಖವನ್ನು ಗಮನಿಸಿ ಈ ಪತ್ರ ಬರೆದಿದ್ದೇನೆ. pic.twitter.com/LceV4MXVE9
— S.Suresh Kumar, Minister – Govt of Karnataka (@nimmasuresh) January 9, 2020