ಮಂಗಳೂರು: ಬಡತನ, ವೈಯಕ್ತಿಕ ಸಮಸ್ಯೆ ಹಾಗೂ ಓದಿನಲ್ಲಿ ಆಸಕ್ತಿ ಇಲ್ಲದ ಹಿನ್ನೆಲೆ ಬಾಲಕನೋರ್ವ ಬೈಕಿನಲ್ಲಿ ಬಂದವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕತೆ ಕಟ್ಟಿರುವುದು ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.
ಕೃಷ್ಣಾಪುರದಲ್ಲಿ ಜೂ.27ರಂದು ರಾತ್ರಿ 9.30ಕ್ಕೆ ಮದ್ರಸಾದಿಂದ ಮನೆಗೆ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಬೈಕ್ನಲ್ಲಿ ಬಂದ ಇಬ್ಬರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಸುರತ್ಕಲ್ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿ, ಬಾಲಕನಿಗೆ ಹಲ್ಲೆಗೈಯ್ಯಲಾಗಿದೆ ಎಂಬ ಸುದ್ದಿ ಸುರತ್ಕಲ್, ಕೃಷ್ಣಾಪುರ, ಚೊಕ್ಕಬೆಟ್ಟು ವ್ಯಾಪ್ತಿಯಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗಿದ್ದು, ಸನ್ನಿವೇಶ, ಸಾಕ್ಷಿ, ಸಿಸಿ ಕ್ಯಾಮರಾ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಬಾಲಕನನ್ನು ವಿಚಾರಣೆ ನಡೆಸಿದಾಗ ಆತನಿಗೆ ವೈಯಕ್ತಿಕ ಸಮಸ್ಯೆಯಿದ್ದು, ಎಷ್ಟು ಓದಿದರೂ ಅರ್ಥವಾಗುತ್ತಿರಲಿಲ್ಲ. ಶಾಲೆಯಲ್ಲೂ ಸರಿಯಾದ ಸ್ನೇಹಿತರಿರಲಿಲ್ಲ, ಮನೆಯಲ್ಲಿ ಬಡತನ. ಈ ರೀತಿಯ ಗೊಂದಲದಿಂದ ಮಾನಸಿಕವಾಗಿ ನೊಂದ ಬಾಲಕ ತನ್ನದೇ ಪೆನ್ನಿಂದ ಅಂಗಿಗೆ ತೂತು ಮಾಡಿ ಹಲ್ಲೆಗೈದಿರುವ ಬಗ್ಗೆ ವಿವಾದ ಸೃಷ್ಟಿಸಿದ್ದಾನೆ. ವಿಚಾರಣೆ ವೇಳೆ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬಾಲಕನ ಹೇಳಿಕೆ ಬಳಿಕ ಮದರಸಾ ಮುಖಂಡರಿಗೆ ಮತ್ತು ಪಾಲಕರಿಗೆ ಸಮಾಧಾನವಾಗಿದೆ. ಕೆಲವರು ಈ ಘಟನೆಯನ್ನು ಕೋಮು ದ್ವೇಷ ಹಬ್ಬಿಸುವ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.