ಬೆಂಗಳೂರು: ಈಗ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಿ ಹೋದರೂ ಕನಿಷ್ಠ ಒಂದೆರಡು ಸಿಗ್ನಲ್ಗಳಾದರೂ ಎದುರಾಗುತ್ತವೆ. ಆದರೆ 58 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದ್ದಿದ್ದು ಒಂದೇ ಒಂದು ಟ್ರಾಫಿಕ್ ಸಿಗ್ನಲ್.
ಹೌದು.. 1963ರಲ್ಲಿ ಸ್ಥಾಪಿಸಲಾಗಿರುವ ಬೆಂಗಳೂರಿನ ಪ್ರಪ್ರಥಮ ಟ್ರಾಫಿಕ್ ಸಿಗ್ನಲ್ ಸ್ಮರಣಾರ್ಥ ಇಂದು ಆ ಸಿಗ್ನಲ್ನಲ್ಲೇ ಶಿಲಾಫಲಕವನ್ನು ಅಳವಡಿಸಿ, ಅದರ ಇತಿಹಾಸವನ್ನು ಸಾರ್ವಜನಿಕರಿಗೆ ಸುಲಭದಲ್ಲಿ ತಿಳಿಸುವ ಕೆಲಸಕ್ಕೆ ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ.
ವಿಶೇಷವೆಂದರೆ ರಾಜಧಾನಿಯ ಪ್ರಪ್ರಥಮ ಟ್ರಾಫಿಕ್ ಸಿಗ್ನಲ್ಅನ್ನು ಅಂದು ಉದ್ಘಾಟಿಸಿದ್ದು ಬೆಂಗಳೂರಿನ ಪ್ರಪ್ರಥಮ ಪೊಲೀಸ್ ಆಯುಕ್ತ ಸಿ. ಚಾಂಡಿ ಹಾಗೂ ಅಂದಿನ ಉಪ ಪೊಲೀಸ್ ಆಯುಕ್ತ (ಸಂಚಾರ) ಬಿ.ಎನ್. ಗರುಡಾಚಾರ್. ಇದೀಗ ಚಾಂಡಿ ಅವರು ಇಲ್ಲವಾದರೂ ಅಂದು ಉದ್ಘಾಟಿಸಿದ್ದ ಬಿ.ಎನ್. ಗರುಡಾಚಾರ್ ಅವರ ಸಮ್ಮುಖದಲ್ಲಿ ಇಂದು ಶಿಲಾಫಲಕವನ್ನು ಅನಾವರಣಗೊಳಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್. ರವಿಕಾಂತೇಗೌಡ ಹಾಗೂ ಗರುಡಾಚಾರ್ ಅವರ ಪುತ್ರ, ಶಾಸಕ ಉದಯ್ ಗರುಡಾಚಾರ್ ಅವರು ಶಿಲಾಫಲಕವನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಬಿ.ಎನ್. ಗರುಡಾಚಾರ್ ಅವರನ್ನು ಸನ್ಮಾನಿಸಲಾಯಿತು.
ಅಂದಹಾಗೆ, ಬೆಂಗಳೂರಿನ ಈ ಪ್ರಪ್ರಥಮ ಟ್ರಾಫಿಕ್ ಸಿಗ್ನಲ್ ಇರುವುದು ಬಿಬಿಎಂಪಿ ಕಚೇರಿ ಬಳಿಯ ಎನ್.ಆರ್.ಜಂಕ್ಷನ್ನಲ್ಲಿ. ಅಂದು ಸ್ಥಾಪನೆಯಾದ ಈ ಟ್ರಾಫಿಕ್ ಸಿಗ್ನಲ್ ಬಳಿಕ, ಅಂದರೆ ಕಳೆದ 58 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಒಟ್ಟು 353 ಟ್ರಾಫಿಕ್ ಸಿಗ್ನಲ್ಗಳ ಅಳವಡಿಕೆ ಆಗಿದೆ.