ಬೆಂಗಳೂರು: ಮತ್ತೆ ಲಾಕ್ಡೌನ್ ಆಗಬಾರದು ಎಂದರೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ. ಕರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಈ ನಿಯಮಗಳನ್ನು ಜನರು ಹೇಗೆ ಪಾಲಿಸುತ್ತಾರೆ ಎಂದು ಕಾದು ನೋಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ಖಡಕ್ ಸೂಚನೆ ನೀಡಿದ್ದಾರೆ.
ಹೆಚ್ಚುತ್ತಿರುವ ಕರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ನಡೆಸಿದ ಸಭೆ ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿ ಮಾ.17ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ನೀಡಲಿರುವ ಸಲಹೆ, ವಾರದ ನಂತರ ಪರಿಸ್ಥಿತಿ ಅವಲೋಕಿಸಿ ಅನಿವಾರ್ಯವೆನಿಸಿದರೆ ಬಿಗಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆಲವು ಜಿಲ್ಲೆಗಳಲ್ಲಿ ಕರೊನಾ ಸೋಂಕು ಪ್ರಮಾಣ ಜಾಸ್ತಿ, ಮರಣ ಪ್ರಮಾಣ ಕಡಿಮೆ ಇದೆ. ಎರಡನೇ ಅಲೆ ಮುನ್ಸೂಚನೆ ಇದು ಎಂದು ತಜ್ಞರ ತಂಡ ತಿಳಿಸಿದೆ. ಪರಿಸ್ಥಿತಿ ಎದುರಿಸಲು ಕೆಲವು ಸಲಹೆಗಳನ್ನು ನೀಡಿದ್ದು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ, ಮತ್ತೆ ಲಾಕ್ಡೌನ್ ಆಗಬಾರದು ಎಂದರೆ ಜನತೆ ಕಟ್ಟುನಿಟ್ಟಾಗಿ ಕರೊನಾ ನಿಯಮ ಪಾಲಿಸಬೇಕು ಎಂದು ಸಿಎಂ ಮನವಿ ಮಾಡಿದರು.
ಕಳೆದ 14 ದಿನಗಳಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ, ಮರಣ ದರ ಕಡಿಮೆ ಇದೆ. ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಉಡುಪಿ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ. ಇದು ಕರೊನಾ ಎರಡನೇ ಅಲೆಯ ಮುನ್ಸೂಚನೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪಾಸಿಟಿವ್ ಇರುವ ಜಿಲ್ಲೆಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದರು. ಮತದಾರರ ಪಟ್ಟಿ ಆಧರಿಸಿ ಹಿರಿಯ ನಾಗರಿಕರನ್ನು ಗುರುತಿಸಿ ಲಸಿಕೆ ಹಾಕುವುದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರಿಗೆ ಲಸಿಕೆ ಸೇರಿ ಕರೊನಾ ಹೆಚ್ಚು ಇರುವ ಜಿಲ್ಲೆಗಳಲ್ಲಿ ಕೈಗೊಳ್ಳುವ ಸಲಹೆ ನೀಡಲಾಗಿದೆ ಎಂದರು.
ಕರೊನಾ ನಿಯಂತ್ರಣಕ್ಕಾಗಿ ಸಲಹೆ-ಸೂಚನೆಗಳು
- ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಡ್ಡಾಯ. ಉಲ್ಲಂಘಿಸಿದಲ್ಲಿ ದಂಡ ಅನಿವಾರ್ಯ.
- ಮದುವೆ, ಸಾಮಾಜಿಕ-ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರ ಸಂಖ್ಯೆ 500 ಮೀರಬಾರದು.
- ಕರೊನಾ ಪರೀಕ್ಷೆ ಹೆಚ್ಚಿಸಬೇಕು, ರೋಗಲಕ್ಷಣ ಇರುವವರಿಗೆ ಪರೀಕ್ಷೆ ಹೆಚ್ಚಿಸಬೇಕು.
- ಸಂಪರ್ಕಿತರ ಪತ್ತೆ ಕಾರ್ಯ ಚುರುಕುಗೊಳಿಸುವುದು.
- ಕರೊನಾ ಆಸ್ಪತ್ರೆಗಳಲ್ಲಿ, ಆಕ್ಸಿಜನ್, ಐಸಿಯು ಕರೊನಾ ಕೇರ್ಗೆ ಸಿದ್ಧತೆ ಮಾಡಿಕೊಳ್ಳಬೇಕು. ಖಾಸಗಿ ಆಸ್ಪತ್ರೆಯಲ್ಲಿ ಹಿಂದಿನಂತೆ ಚಿಕಿತ್ಸೆ ವ್ಯವಸ್ಥೆ.
- ಹಿರಿಯ ನಾಗರಿಕರಿಗೆ ಲಸಿಕೆ ನೀಡಿಕೆಯಲ್ಲಿ ಚುರುಕು. ಗ್ರಾಮೀಣ ಪ್ರದೇಶ, ಕೊಳೆಗೇರಿಯಲ್ಲಿ ಲಸಿಕೆ ಹೆಚ್ಚಿಸಬೇಕು. ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಜೊತೆ ನೆರವು ಪಡೆದು ಲಸಿಕೆ.
- ವಾಹನಗಳಲ್ಲಿ ನಿಗದಿ ಮೀರಿ ಪ್ರಯಾಣಿಕರನ್ನು ಕರೆದೊಯ್ಯುವುದಕ್ಕೆ ಕಡಿವಾಣ ಹಾಕುವುದಕ್ಕೆ ಹೆಚ್ಚಿನ ಅರಿವು ಮೂಡಿಸಲು ತೀರ್ಮಾನ.
ಮಹಾರಾಷ್ಟ್ರ, ಕೇರಳದಿಂದ ಬರುವವರ ಮೇಲೆ ಹೆಚ್ಚಿನ ನಿಗಾ.
ಬಿಎಸ್ವೈ ಖಡಕ್ ವಾರ್ನಿಂಗ್
ಮತ್ತೊಮ್ಮೆ ಲಾಕ್ಡೌನ್ ಆಗಬಾರದು ಎನ್ನುವ ಅಪೇಕ್ಷೆ ಇದ್ದರೆ ಕಟ್ಟುನಿಟ್ಟಿನ ಕ್ರಮ ನೀವೇ ಕೈಗೊಳ್ಳಬೇಕು. ಈಗ ಕರೊನಾ ಜಾಗೃತಿ ಹೋಗಿದೆ, ಜಾತ್ರೆ ಸಂತೆಯಲ್ಲಿ ಶೇ.80 ಜನ ಮಾಸ್ಕ್ ಧರಿಸುತ್ತಿಲ್ಲ, ಜನ ಸಹಕಾರ ಕೊಡಬೇಕು, ಜನರ ಸಹಕಾರ ಇಲ್ಲದೆ ಯಶಸ್ವಿ ಆಗುವುದಿಲ್ಲ.
ದಂಡ ಹಾಕುವ ಮಟ್ಟಕ್ಕೆ ಜನರು ಹೋಗಬಾರದು, ಒಂದು ವಾರ ಕಾದು ನೋಡುತ್ತೇವೆ, ನಂತರ ದಂಡ ಹಾಕುವುದು ಅನಿವಾರ್ಯ. ಕರ್ಫ್ಯೂ ಇತ್ಯಾದಿ ಇಂದು ಚರ್ಚೆ ಆಗಿಲ್ಲ, ಮೋದಿ ಸಭೆ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ.
ದೊಡ್ಡವರು-ಚಿಕ್ಕವರು ಎನ್ನುವ ಪ್ರಶ್ನೆ ಇಲ್ಲ, ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ, ಸಭೆ-ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನ ಸೇರಬಾರದು, ಹೆಚ್ಚು ಜನ ಸೇರುವುದಾದರೆ ಬ್ಯಾಚ್ಗಳಲ್ಲಿ ಬರಲಿ.
ಕರೊನಾ ನಿಯಮ ಉಲ್ಲಂಘನೆ : ಬಾಲಿವುಡ್ ನಟಿ ವಿರುದ್ಧ ಮುಂಬೈ ಪಾಲಿಕೆ ದೂರು
ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಎಲ್ಲದ್ದಕ್ಕೂ ಗುಡ್ಬೈ ಎಂದ ಆಮೀರ್- ಕಾರಣ ಇಲ್ಲಿದೆ ನೋಡಿ…