ಕಲಬುರಗಿ: ಚಿಂಚೋಳಿ ಬಸ್ ನಿಲ್ದಾಣದಿಂದ ಕಳ್ಳತನವಾಗಿದ್ದ ಬಸ್ಸನ್ನು ಘಟನೆ ನಡೆದ 13 ಗಂಟೆಯಲ್ಲಿ ಚಿಂಚೋಳಿ ಠಾಣೆ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗ್ಗೆ ನುಸುಕಿನ ಜಾವ 3.30 ಸುಮಾರಿಗೆ ಕಲಬುರಗಿ ಜಿಲ್ಲೆ ಚಿಂಚೋಳ್ಳಿ ಪಟ್ಟಣದಲ್ಲಿರುವ ಬಸ್ ನಿಲ್ದಾಣದಿಂದ ಬೀದರ್ ಡಿಪೋದ KA38F971 ಸಂಖ್ಯೆಯ ಬಸ್ ಕಳ್ಳತನಾಗಿತ್ತು. ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳತನವಾಗಿರುವ ಬಸ್ಸಿಗಾಗಿ ಹುಡುಕಾಟ ನಡೆಸಿದ್ದು, ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂ ಕೈಲಾಸ ತಾಂಡಾದಲ್ಲಿ ಬಸ್ ಪತ್ತೆಯಾಗಿದೆ.
ಇದನ್ನೂ ಓದಿ: ಧರ್ಮಾಧಾರಿತ ರಾಜಕೀಯ ಬಿಟ್ಟು ಬಿಡಿ… ಅಭಿವೃದ್ಧಿ ಕಾರ್ಯಗಳ ಮೇಲೆ ಚರ್ಚೆ ಮಾಡೋಣ ಬನ್ನಿ!
ಖದೀಮರು ಬಸ್ಸನ್ನು ತಾಂಡಾದ ಹೊರವಲಯದಲ್ಲಿ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಬಸ್ ಇರೋದನ್ನು ಪತ್ತೆ ಮಾಡಿರುವ ಚಿಂಚೋಳಿ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಖದೀಮರು ಬಸ್ಸನ್ನು ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಎರಡು ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಸ್ವಾರಸ್ಯವೆಂದರೆ, ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮುಂದೆಯೇ ಖದೀಮರು ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದರು. ಆದರೆ ಸರ್ಕಾರಿ ಬಸ್ಸು ಆದ್ದರಿಂದ ಅನುಮಾನ ವ್ಯಕ್ತಪಡಿಸದ ಪೊಲೀಸರು ಸುಮ್ಮನಾಗಿದ್ದರು. ಆದರೆ ಬೆಳಗಾಗುತ್ತಿದ್ದಂತೆ ಠಾಣೆಯಲ್ಲಿ ಬಸ್ಸು ಕಳ್ಳತನದ ಪ್ರಕರಣ ದಾಖಲಾಗಿದೆ.