ವಿಜಯವಾಡ: ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಳೂರಿನಲ್ಲಿ ಕಂಡು ಬಂದಿರುವ ನಿಗೂಢ ವ್ಯಾಧಿಗೆ ಏನು ಕಾರಣವಿರಬಹುದೆಂಬ ಬಗ್ಗೆ ವಿವಿಧ ರೀತಿಯ ತರ್ಕಗಳನ್ನು ಮಾಡಲಾಗುತ್ತಿದೆ. ಅಪಸ್ಮಾರ ಮತ್ತು ವಾಕರಿಕೆಯ ಲಕ್ಷಣ ಹೊಂದಿರುವ ರೋಗಕ್ಕೆ ಜಲಮಾಲಿನ್ಯ ಕಾರಣವೇ ಅಥವಾ ಸೂಕ್ಷ್ಮ ವೈರಸ್ನಿಂದ ಇದು ಉಂಟಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದು ಕರೊನಾದ ಅಡ್ಡ ಪರಿಣಾಮ ಇರಬಹುದೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಶಂಕಿಸುತ್ತಿದ್ದಾರೆ.
ಚೀನಾದ ವುಹಾನ್ನಲ್ಲಿ ಕಳೆದ ವರ್ಷ ಕರೊನಾ ವೈರಸ್ ಕಾಣಿಸಿಕೊಂಡ ಒಂದು ವರ್ಷದ ನಂತರ ಭಾರತದಲ್ಲಿ ಹೊಸ ರೋಗವೊಂದು ಸೃಷ್ಟಿಯಾಗಿರಬಹುದೇ ಎಂದೂ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಏಳೂರು ಪಟ್ಟಣದ ವಿವಿಧ ಕಡೆ ಜನರು ಮೂರ್ಛೆ (ಫಿಟ್ಸ್) ಮತ್ತು ವಾಕರಿಕೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದು ಆತಂಕ ಸೃಷ್ಟಿಸಿದೆ. ನಿಗೂಢ ರೋಗದ ಕಾರಣ 347 ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದರು. 150 ಮಂದಿ ಮನೆಗಳಿಗೆ ಮರಳಿದ್ದಾರೆ. 45 ವರ್ಷದ ವ್ಯಕ್ತಿಯೊಬ್ಬ ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ಸಿಎಂ ಭೇಟಿ: ಮುಖ್ಯಮಂತ್ರಿ ಜಗನ್ವೋಹನ್ ರೆಡ್ಡಿ ಏಳೂರು ಮತ್ತು ವಿಜಯವಾಡಗಳಿಗೆ ಸೋಮವಾರ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರಿಗೆ ಸೂಚಿಸಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ ತಜ್ಞರ ತಂಡವನ್ನು ರಚಿಸಿದ್ದು, ಇದು ಮಂಗಳವಾರ ಏಳೂರಿಗೆ ಭೇಟಿ ನೀಡಲಿದೆ.
ನಿಗೂಢ ವ್ಯಾಧಿಗೆ ನೀರು ಕಲುಷಿತಗೊಂಡಿರುವುದು ಕಾರಣವಲ್ಲ ಎನ್ನುವುದು ಪರೀಕ್ಷೆಗಳಿಂದ ದೃಢಪಟ್ಟಿದೆ.
| ಎ.ಕೆ.ಕೆ. ಶ್ರೀನಿವಾಸ್ ಡಿಸಿಎಂ