More

    ಶಾಸಕ ರಾಜು ಕಾಗೆ ಹೇಳಿಕೆ: ಕಾಂಗ್ರೆಸ್ ನ ಹೀನ ಸಂಸ್ಕೃತಿ ದ್ಯೋತಕವೆಂದ ಬಿ.ವೈ.ವಿಜಯೇಂದ್ರ

    ಬೆಂಗಳೂರು: ರಾಹುಲ್ ಗಾಂಧಿ ಮನಸ್ಥಿತಿಯು ಕಾಂಗ್ರೆಸ್ ಶಾಸಕ ರಾಜು ಕಾಗೆ ಬಾಯಲ್ಲಿ ಅಪಶಕುನ ನುಡಿಸಿದೆ. ಸಾವುಗಳನ್ನು ಆಧರಿಸಿ ಅಧಿಕಾರಗಳನ್ನು ಗಳಿಸಿದ ಹಿನ್ನಲೆಯ ಕಾಂಗ್ರೆಸ್ಸಿಗರು ಅಮೂಲ್ಯ ಜೀವಗಳ ಸಾವುಗಳಿಗಾಗಿ ಚಡಪಡಿಸುವುದು ಅವರ ಹೀನ ಸಂಸ್ಕೃತಿಯ ದ್ಯೋತಕವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

    ಸಾಮಾಜಿಕ ತಾಲ ತಾಣದ ತಮ್ಮ ಖಾತೆಯಲ್ಲಿ ದೀರ್ಘ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ. ಮೋದಿಯವರ ಸಾವು ಕಾಂಗ್ರೆಸ್ ಏಕೆ ಬಯಸುತ್ತದೆ? ಎಂದು ವಿಜಯೇಂದ್ರ ಸರಣಿ ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟಿದ್ದಾರೆ.

    ಆರ್ಟಿಕಲ್ 370 ರದ್ದುಗೊಳಿಸಿ, ಭಾರತದ ಕಿರೀಟ ಕಾಶ್ಮೀರವನ್ನು ಉಳಿಸಿದ್ದಕ್ಕಾಗಿಯೇ? ಐದು ಶತಮಾನಗಳ ಭಾರತೀಯರ ಕನಸು ಈಡೇರಿಸಲು ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ ಕಾರಣಕ್ಕಾಗಿಯೇ?

    ದೇಶವನ್ನು ಮುಕ್ಕಿ ತಿನ್ನುತ್ತಿದ್ದ ಭಯೋತ್ಪಾದಕತೆಯನ್ನು ಬೇರು ಸಮೇತ ಕಿತ್ತೊಗೆದು ರಾಷ್ಟ್ರವನ್ನು ರಕ್ಷಿಸಿದ ಕಾರಣಕ್ಕಾಗಿಯೇ? ವಿಶ್ವದಲ್ಲಿ ಭಾರತವನ್ನು ಆರ್ಥಿಕವಾಗಿ 5 ನೇ ಸ್ಥಾನಕ್ಕೇರಿಸಿ ಶಕ್ತಿಶಾಲಿ ರಾಷ್ಟ್ರ ನಿರ್ಮಿಸಿದ ಕಾರಣಕ್ಕಾಗಿಯೇ? ಅಭಿವೃದ್ಧಿಯ ಓಟದಲ್ಲಿ ಜಾಗತಿಕ ಪೈಪೋಟಿಯ ನಡುವೆ ಭಾರತವನ್ನು ಮುಂಚೂಣಿ ಸ್ಥಾನದಲ್ಲಿ ತಂದು ನಿಲ್ಲಿಸಿದ ಕಾರಣಕ್ಕಾಗಿಯೇ?

    ದೇಶದ ಕಟ್ಟಕಡೆಯ ಪ್ರಜೆಯೂ ಸ್ವಾಭಿಮಾನದ ಬದುಕು ರೂಪಿಸಲು ಹತ್ತು ಹಲವು ಯೋಜನೆಗಳನ್ನು ಸಮರ್ಪಿಸಿದ ಕಾರಣಕ್ಕಾಗಿಯೇ?‌. ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡಿ ಕಪ್ಪು ಚುಕ್ಕೆ ಇಲ್ಲದ ಪರಿಶುಭ್ರ ಆಡಳಿತ ನೀಡಿ ಜನರಿಂದ ‘ಸೈ’ ಅನಿಸಿಕೊಂಡ ಕಾರಣಕ್ಕಾಗಿಯೇ? ಎಂದು ವಿಜಯೇಂದ್ರ ಪ್ರಶ್ನೆಗಳೆ ಸುರಿಮಳೆಗೈದು ಕಿಡಿಕಾರಿದ್ದಾರೆ

    ಬೃಹತ್ ವೃಕ್ಷ

    ಭಾರತೀಯ ಜನತಾ ಪಾರ್ಟಿ ವ್ಯಕ್ತಿ ಆಧಾರಿತವಾಗಿ ಬೆಳೆದುದ್ದಲ್ಲ, ಸಿದ್ಧಾಂತ, ತತ್ವಗಳನ್ನು ಆಧರಿಸಿ ರಾಷ್ಟ್ರ ಭಕ್ತ ಕಾರ್ಯಕರ್ತರ  ಪರಿಶ್ರಮದ ಫಲವಾಗಿ ಬೆಳೆದು ನಿಂತಿರುವ ಬೃಹತ್ ರಾಜಕೀಯ ವೃಕ್ಷವಾಗಿದೆ.

    ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಅವರಂತಹ ಸಾಲು ಸಾಲು ನಾಯಕರನ್ನು ದೇಶಕ್ಕೆ ಸಮರ್ಪಣೆ ಮಾಡಿದ ಪಕ್ಷವೆಂದು ಸಾರಿದ್ದಾರೆ.

    ಈ ನಿಟ್ಟಿನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಗಟ್ಟಿಯಾಗಿ ಪಡಿಮೂಡಿದ ದೇಶ ಮೆಚ್ಚಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು, ಸಮರ್ಥ ಆಡಳಿತಗಾರನಾಗಿ ದೇಶವನ್ನು ಬಲಿಷ್ಠ ಗೊಳಿಸಿದ ಮಹಾನ್ ನೇತಾರ’ ಎನ್ನುವ ಕಾರಣಕ್ಕಾಗಿ ಈ ದೇಶದ ಜನ ಮತ್ತೊಮ್ಮೆ ಅವರ ನಾಯಕತ್ವವನ್ನು ಬಯಸಿ ಪ್ರಧಾನಿಯನ್ನಾಗಿಸಲು ಸಂಕಲ್ಪ ತೊಟ್ಟಿದ್ದಾರೆ.

    ಇದನ್ನು ಸಹಿಸದ ಕಾಂಗ್ರೆಸ್ಸಿಗರ ಬಾಯಲ್ಲಿ ಹತಾಶೆ, ಅಪಶಕುನದ ಮಾತುಗಳಲ್ಲದೇ ಇನ್ನೇನು ಬರಲು ಸಾಧ್ಯ? ಕೊಳಕು ಮನಸ್ಸುಗಳು ಮಾತ್ರ ವಿಕೃತಿಯ ಮಾತನಾಡಲು ಸಾಧ್ಯ. ಅಂತಹದ್ದೇ ಸಾಲಿಗೆ ಸೇರಿರುವ ಶಾಸಕ (ರಾಜು )ಕಾಗೆ ಬಾಯಿಂದ  ಮೋದಿಯವರ ಕುರಿತು ಕಾಂಗ್ರೆಸ್ಸಿಗರು ಅಪಶಕುನವನ್ನು ಉಗುಳಿಸಿದ್ದಾರೆ.

    ದೈವ ಬಲ, ಜನಾಶೀರ್ವಾದದ ಶಕ್ತಿ ಮೋದಿಯವರ ರಕ್ಷಣೆಗೆ ನಿಂತಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಅದನ್ನು ಪ್ರತಿಫಲಿಸಲಿದೆ ಎಂದು ಬಿ.ವೈ.ವಿಜಯೇಂದ್ರ ಚಾಟಿ ಬೀಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts