ಶಿವಮೊಗ್ಗ : ರಾಜ್ಯ ಉಸ್ತುವಾರಿ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ನಗರದ ಹೆಲಿಪ್ಯಾಡ್ನಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಅವರ ಜತೆ ಹೆಲಿಕಾಪ್ಟರ್ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ ಕೂಡ ಆಗಮಿಸಿದರು.
ಎರಡು ದಿನಗಳ ಬಿಜೆಪಿ ವಿಶೇಷ ಸಭೆ, ಕಾರ್ಯಕಾರಣಿ ಸಭೆ ಹಿನ್ನೆಲೆಯಲ್ಲಿ ಒಟ್ಟಿಗೆ ಬಂದಿಳಿದ ನಾಯಕರಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಹರತಾಳ ಹಾಲಪ್ಪ, ಎಂಎಲ್ಸಿಗಳಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮತ್ತಿತರರು ಸ್ವಾಗತ ಕೋರಿದರು.
ಹೆಲಿಪ್ಯಾಡ್ನಿಂದ ಪ್ರವಾಸಿ ಮಂದಿರದ ಮುಖ್ಯ ದ್ವಾರದವರೆಗೆ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಯಲ್ಲಿ ಗಣ್ಯರನ್ನು ಕರೆತರಲಾಯಿತು. ಅದಕ್ಕೂ ಮೊದಲು ಸಕ್ರೆಬೈಲ್ ಬಳಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೆ ಆನೆಯಿಂದ ಹೂಮಾಲೆ ಹಾಕಿಸಿ ಬರಮಾಡಿಕೊಳ್ಳಲಾಯಿತು.