ಕೋಯಿಕ್ಕೋಡ್: ಇಲ್ಲಿನ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇರಳ ಸರ್ಕಾರ 10 ಲಕ್ಷ ರೂ.ಘೋಷಣೆ ಮಾಡಿದೆ.
ಶುಕ್ರವಾರ ರಾತ್ರಿ ದುಬೈನಿಂದ ಬಂದ ವಿಮಾನ 35 ಅಡಿ ಆಳದ ಕಮರಿಗೆ ಬಿದ್ದು ಎರಡು ಹೋಳಾಗಿದೆ. ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿದೆ. 149 ಗಾಯಾಳುಗಳು ಮಲಪ್ಪುರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಅವರ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ, ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ.ನೀಡಲು ಕೇರಳ ಸರ್ಕಾರ ನಿರ್ಧಾರ ಮಾಡಿದೆ. ಹಾಗೇ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಅಪಘಾತ: ಪ್ರಯಾಣಿಕರಿಬ್ಬರಲ್ಲಿ ಕರೊನಾ ದೃಢ, ಸಿಐಎಸ್ಎಫ್ ಸಿಬ್ಬಂದಿ ಕ್ವಾರಂಟೈನ್
ಮೃತಪಟ್ಟ 19 ಮಂದಿಯಲ್ಲಿ 15 ಜನರು ವಯಸ್ಕರು. 4 ಮಂದಿ ಮಕ್ಕಳು. ಸುಮಾರು 23 ಮಂದಿ ಪರಿಸ್ಥಿತಿ ಗಂಭೀರವಾಗಿದೆ. ಹಾಗೇ ಇಂದು 23 ಜನರನ್ನು ಡಿಸ್ಚಾರ್ಜ್ ಕೂಡ ಮಾಡಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)