ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಪವಿತ್ರ ರಾಮಮಂದಿರಕ್ಕೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಭಕ್ತರು ಒಂದಲ್ಲಾ ರೂಪದಲ್ಲಿ ರಾಮಮಂದಿರಕ್ಕೆ ತಮ್ಮ ಕೈಲಾದಷ್ಟು ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ.
ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಏರ್ ಇಂಡಿಯಾ ಜನವರಿ 17ರಂದು ಬೆಂಗಳೂರು ಮತ್ತು ಕಲ್ಕತ್ತಾದಿಂದ ಅಯೋಧ್ಯೆಗೆ ವಿಮಾನ ಸೇವೆಯನ್ನು ಆರಂಭಿಸುವುದಾಗಿ ತಿಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ಹೊರಡಿಸಿದೆ.
ಬೆಂಗಳೂರು-ಅಯೋಧ್ಯೆ ಮಾರ್ಗದ ಮೊದಲ ವಿಮಾನವು ಜನವರಿ 17 ರಂದು ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದಿಂದ ಬೆಳಿಗ್ಗೆ 8.05ಕ್ಕೆ ಹೊರಟು 10.35 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಅದೇ ರೀತಿ ಹಿಂತಿರುಗುವ ವಿಮಾನವು ಅಯೋಧ್ಯೆಯಿಂದ ಮಧ್ಯಾಹ್ನ 3.40 ಕ್ಕೆ ಹೊರಡಲಿದ್ದು, ಸಂಜೆ 6.10 ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ.
ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಕ್ಯಾಪ್ಟನ್ ವಿಜಯಕಾಂತ್
ಅಯೋಧ್ಯೆ-ಕಲ್ಕತ್ತಾ ಮಾರ್ಗದ ವಿಮಾನವು ಅಯೋಧ್ಯೆಯಿಂದ ಬೆಳಿಗ್ಗೆ 11.05 ಕ್ಕೆ ಹೊರಡಲಿದೆ. ಮಧ್ಯಾಹ್ನ 12.50ಕ್ಕೆ ಕಲ್ಕತ್ತಾದಲ್ಲಿ ಲ್ಯಾಂಡ್ ಆಗಲಿದೆ. ಕಲ್ಕತ್ತಾ-ಅಯೋಧ್ಯೆ ವಿಮಾನವು ಕೋಲ್ಕತ್ತಾದಿಂದ ಮಧ್ಯಾಹ್ನ 1:25 ಕ್ಕೆ ಹೊರಡಲಿದ್ದು, ಮಧ್ಯಾಹ್ನ 3.10 ಕ್ಕೆ ಅಯೋಧ್ಯೆಗೆ ವಾಪಸ್ ಆಗಲಿದೆ. ಡಿಸೆಂಬರ್ 30ರಂದು ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದ್ದು, ಇದರ ಭಾಗವಾಗಿ ದೆಹಲಿ ಹಾಗೂ ಅಯೋದ್ಯೆ ನಡುವೆ ಮೊದಲ ವಿಮಾನ ಸಂಚರಿಸಲಿದೆ.
ಈ ಕುರಿತು ಮಾತನಾಡಿರುವ ಏರ್ ಇಂಡಿಯಾ ವಾಣಿಜ್ಯ ಅಧಿಕಾರಿ ಅಂಕುರ್ ಗಾರ್ಗ್, ಭಾರತದಾದ್ಯಂತ ಸಂಪರ್ಕಿಸುವ ವಾಯು ಮಾರ್ಗ ಕಾರ್ಯಾಚರಣೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯು ಅಚಲವಾಗಿದೆ. ಅಯೋಧ್ಯೆಯನ್ನು ನವದೆಹಲಿ, ಬೆಂಗಳೂರು, ಕೋಲ್ಕತ್ತಾ ಜೊತೆಗೆ ಜೋಡಿಸುವ ಕೆಲಸವು ಈ ಬದ್ಧತೆಯನ್ನು ದೃಢಪಡಿಸುತ್ತದೆ ಎಂದು ಹೇಳಿದ್ದಾರೆ.