ಬೆಂಗಳೂರು: ಸಚಿವ ಸಂಪುಟಕ್ಕೆ ಹೊಸದಾಗಿ ಯಾರು ಸೇರಿಕೊಳ್ಳುತ್ತಾರೆ ಎಂಬ ಕುತೂಹಲಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೆರೆ ಎಳೆದಿದ್ದಾರೆ. ಹೊಸದಾಗಿ ಏಳು ಮಂದಿ ಸಿಎಂ ಬಿಎಸ್ವೈ ಸಚಿವ ಸಂಪುಟ ಸೇರಲಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಏಳು ಸಚಿವರ ಹೆಸರಿರುವ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದ್ದು, ಅದರಲ್ಲಿ ಎಂಟಿಬಿ ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿ, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್ ಹಾಗೂ ಅರವಿಂದ ಲಿಂಬಾವಳಿಗೆ ಸ್ಥಾನ ನೀಡಲಾಗಿದೆ ಎಂದು ಸಿಎಂ ಬಿಎಸ್ವೈ ಹೇಳಿದರು.
ಮುನಿರತ್ನಗೆ ಕೈತಪ್ಪಿದ ಸಚಿವ ಸ್ಥಾನ
ಸಚಿವ ಸ್ಥಾನದ ಬಗ್ಗೆ ಭಾರಿ ಆಸೆಯಿಟ್ಟುಕೊಂಡಿದ್ದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಸಚಿವ ಸ್ಥಾನ ಕೈತಪ್ಪಿರುವುದರಿಂದ ತುಂಬಾ ನಿರಾಸೆಯಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಲು ರಾಜೀನಾಮೆ ನೀಡದವರ ಗುಂಪಿನಲ್ಲಿ ಮುನಿರತ್ನ ಸಹ ಪ್ರಮುಖರು. ಉಪಚುನಾವಣೆಯಲ್ಲೂ ಪ್ರಚಂಡ ಬಹುಮತದಿಂದ ಜಯ ಸಾಧಿಸಿದ್ದರು. ಹೀಗಾಗಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಕೊನೆಯವರೆಗೂ ಮುನಿರತ್ನ ಅವರ ಹೆಸರು ಕೇಳಿಬರುತ್ತಿತ್ತು. ಆದರೆ, ಸಚಿವ ಸಂಪುಟಕ್ಕೂ ಮುನ್ನ ಸಿಎಂ ಬಿಎಸ್ವೈ ಹೇಳಿಕೆಯಿಂದ ನಿರೀಕ್ಷೆಯೆಲ್ಲ ಹುಸಿಯಾಗಿದೆ.
ಸಚಿವ ನಾಗೇಶ್ ರಾಜೀನಾಮೆಗೆ ಮನವೊಲಿಕೆ
ಸಚಿವ ನಾಗೇಶ್ ರಾಜೀನಾಮೆ ನೀಡುವಂತೆ ಸಿಎಂ ಬಿಎಸ್ವೈ ಮನವೊಲಿಸುತ್ತಿದ್ದು, ರಾಜೀನಾಮೆ ಪಡೆದು ಒಂದು ಸ್ಥಾನ ಖಾಲಿ ಉಳಿಸಿಕೊಳ್ಳುವ ಪ್ಲಾನ್ ಮಾಡಿದ್ದಾರೆ. ಬಜೆಟ್ ನಂತರ ಮತ್ತೊಂದು ಬಾರಿ ಸಂಪುಟ ಪುನರ್ ರಚನೆಗೆ ಸಿಎಂ ಯೋಜನೆ ರೂಪಿಸಿಕೊಂಡಿದ್ದು, ಮೂಲ ಬಿಜೆಪಿಯ 6ರಿಂದ 7 ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಮಣೆಹಾಕಲು ತಿರ್ಮಾನ ಮಾಡಿದ್ದಾರೆ.