ಬೆಂಗಳೂರು: 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪ್ರಿಂಟಿಂಗ್ ಪ್ರೆಸ್ ಮಾಲೀಕ ನಾಗೇಶ್ ಮರಳಿ ಮತ್ತು ಹರಿಣಾಕ್ಷಿ ದಂಪತಿ ಪುತ್ರ ನಿಖಿಲೇಶ್ ಎನ್. ಮರಳಿ ರಾಜ್ಯಕ್ಕೆ ಮೊದಲಿಗನಾಗಿ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞ ಎಜುಕೇಶನ್ ಸೆಂಟರ್ ಎಚ್.ಎಸ್. ಸಂಸ್ಥೆಯ ವಿದ್ಯಾರ್ಥಿ ನಿಖಿಲೇಶ್, 625ಕ್ಕೆ 625 ಅಂಕ ಪಡೆದಿದ್ದಾರೆ. ಸತತ ಓದು ಹಾಗೂ ಪ್ರಯತ್ನಶೀಲತೆ ಮೂಲಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ನಿಖಿಲೇಶ್, ಐಎಎಸ್ ಅಧಿಕಾರಿಯಾಗುವ ಮಹತ್ತರ ಗುರಿ ಹೊಂದಿದ್ದಾರೆ.
ಇದನ್ನೂ ಓದಿರಿ ಸರ್ಕಾರಿ ಶಾಲೆಯ ಸನ್ನಿಧಿ ಎಸ್ಎಸ್ಎಲ್ಸಿ ಟಾಪರ್
ಮಾರ್ಚ್-ಏಪ್ರಿಲ್ನಲ್ಲೇ ನಡೆಯಬೇಕಿದ್ದ ಪರೀಕ್ಷೆಯನ್ನು ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಲಾಕ್ಡೌನ್ ಅವಧಿಯನ್ನೇ ಸದುಪಯೋಗ ಪಡಿಸಿಕೊಂಡ ನಿಖಿಲೇಶ್, ಪಠ್ಯಗಳನ್ನು ನಿರಂತರವಾಗಿ ಮರು ಅಭ್ಯಾಸ ಮಾಡಿದ್ದರು.
ತನ್ನ ಸಾಧನೆ ಬಗ್ಗೆ ವಿಜಯವಾಣಿ ಜತೆ ಮಾತನಾಡಿದರು ಅವರು, ‘ಆರಂಭದಲ್ಲಿ ಪ್ರತಿ ದಿನ 2 ರಿಂದ 3 ಗಂಟೆ ಅಭ್ಯಸಿಸುತ್ತಿದ್ದೆ. ಲಾಕ್ಡೌನ್ನಿಂದ ಪರೀಕ್ಷೆ ಮುಂದೂಡಲ್ಪಟ್ಟ ಬಳಿಕ ನಿತ್ಯ 8 ಗಂಟೆ ಓದುತ್ತಿದ್ದೆ. ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಶಾಲಾ ಶಿಕ್ಷಕರು ಸೂಕ್ತ ರೀತಿಯಲ್ಲಿ ಬೋಧನೆ ಮಾಡುತ್ತಿದ್ದರು. ಈಗ ಪಿಯುಸಿನಲ್ಲಿ ಪಿಸಿಎಂಸಿ ವಿಷಯ ತೆಗೆದುಕೊಳ್ಳುವೆ. ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವೆ’ ಎಂದು ತನ್ನ ಕನಸನ್ನು ಬಿಚ್ಚಿಟ್ಟರು.