ಹೈದರಾಬಾದ್: ಲವ್ ಮಾಡು ಅಂತಾ ದುಂಬಾಲು ಬಿದ್ದಿದ್ದ ಯುವಕನ ಕಿರುಕುಳ ತಾಳಲಾರದೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾಗಿರುವ ಘಟನೆ ತೆಲಂಗಾಣದ ಯಾದ್ರಾದ್ರಿ ಭುವನಗಿರಿ ಜಿಲ್ಲೆಯ ಭೂದನ್ ಪೂಚಂಪಲ್ಲಿ ಮಂಡಲದ ಜಿಬ್ಲಾಕ್ಪಲ್ಲಿ ಗ್ರಾಮದಲ್ಲಿ ನಡೆದಿದೆ.
ಕಾವ್ಯ (16) ಮೃತ ವಿದ್ಯಾರ್ಥಿನಿ. ಈಕೆ ಚೌಟುಪ್ಪಲ್ನ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದಳು. ಒಂದೇ ಗ್ರಾಮದ ಶಿವಮಣಿ ಎಂಬಾತ ಪ್ರೀತಿಸುವಂತೆ ಕಾವ್ಯಾಳ ಹಿಂದೆ ಬಿದ್ದಿದ್ದ. ಆಕೆ ಇನ್ಸ್ಟಾಗ್ರಾಂಗೆ ಮಸೇಜ್ ಮಾಡಿ ಒತ್ತಾಯಿಸುತ್ತಿದ್ದ. ಹುಡುಗಿ ನಿರಾಕರಿಸಿದ್ದಕ್ಕೆ ಆಕೆಯ ತಂದೆ ಮತ್ತು ಅಣ್ಣನನ್ನು ಕೊಲೆ ಮಾಡುವುದಾಗಿ ಶಿವಮಣಿ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ್ದ ಕಾವ್ಯಾ, ಈ ವಿಚಾರವನ್ನು ತನ್ನ ಸಹೋದರ ನರೇಶ್ಗೆ ತಿಳಿಸಿದ್ದಳು. ನಂತರ ನರೇಶ್, ಶಿವಮಣಿಗೆ ಎಚ್ಚರಿಕೆ ನೀಡಿದ್ದ.
ಡಿಸೆಂಬರ್ 31ರ ಮಧ್ಯರಾತ್ರಿ ನರೇಶ್ ಮತ್ತು ಶಿವಮಣಿ ನಡುವೆ ಜಗಳ ನಡೆದಿತ್ತು. ಅಂದು ರಾತ್ರಿ ಕಾವ್ಯಾಗೆ ಕರೆ ಮಾಡಿದ ಶಿವಮಣಿ, ನರೇಶ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಆತಂಕಕ್ಕೀಡಾದ ಕಾವ್ಯಾ, ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದಳು. ಅಸ್ವಸ್ಥಗೊಂಡಿದ್ದ ಆಕೆಯನ್ನು ಪಾಲಕರು ಗಮನಿಸಿ, ತಕ್ಷಣ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯ ಬಳಿಕ ಇದೇ ತಿಂಗಳ 2ರಂದು ಡಿಸ್ಚಾರ್ಜ್ ಮಾಡಲಾಗಿತ್ತು.
ಇದಾದ ಬಳಿಕ ಊರಿನಲ್ಲಿ ಪಂಚಾಯಿತಿ ಏರ್ಪಡಿಸಿ, ಎರಡು ಕುಟುಂಬಗಳನ್ನು ಸೇರಿಸಿ, ಶಿವಮಣಿಗೆ ಎಚ್ಚರಿಕೆ ನೀಡಲಾಗಿತ್ತು. ಇನ್ನು ಮುಂದೆ ಕಾವ್ಯಾ ತಂಟೆಗೆ ಹೋಗುವುದಿಲ್ಲ ಎಂದು ಶಿವಮಣಿ ಹೇಳಿದ್ದ. ಆದರೆ, ಶಿವಮಣಿ ಮತ್ತೆ ತನ್ನ ವರಸೆ ಮುಂದುವರಿಸಿದ. ಇನ್ಸ್ಟಾಗ್ರಾಂನಲ್ಲಿ ಮಸೇಜ್ ಕಳುಹಿಸುತ್ತಿದ್ದ. ಇದರಿಂದ ಕಾವ್ಯಾ ಮನನೊಂದಿದ್ದಳು. ಕಳೆದ ಬುಧವಾರ ಪಾಲಕರು ಕೆಲಸಕ್ಕೆಂದು ಜಮೀನಿಗೆ ತೆರಳಿದಾಗ, ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆ ನರೇಶ್ ಮನೆಗೆ ಬಂದಾಗ ಕಾವ್ಯಾಳ ಮೃತದೇಹ ನೇತಾಡುತ್ತಿರುವುದನ್ನು ನೋಡಿ ಕುಸಿದುಬಿದ್ದಿದ್ದ.
ಕಾವ್ಯಾಳ ಮೃತದೇಹವನ್ನು ಭುವನಗಿರಿ ಏರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆಯ ಬಳಿಕ ಗುರುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕಾವ್ಯಾಳ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಇಂದಿನಿಂದ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ…
ನಿಗೂಢವಾಗಿ ನಾಪತ್ತೆಯಾದ ಮಹಿಳಾ ಕ್ರಿಕೆಟರ್: ಫೋನ್ ಸ್ವಿಚ್ ಆಫ್, ಅರಣ್ಯದಲ್ಲಿ ಸ್ಕೂಟರ್ ಪತ್ತೆ
5 ವರ್ಷದ ಮಗುವಿನ ಪ್ರಾಣ ಉಳಿಸಿಕೊಳ್ಳಲು ನೆರವಾಗಿ… ಮದ್ದೂರು ಮೂಲದ ದಂಪತಿ ಮನವಿ