ಬೆಳಗಾವಿ: ಲಾಕ್ಡೌನ್ ಅವಧಿಯಲ್ಲಿ ಸಮಯ ವ್ಯರ್ಥ ಮಾಡದೇ ಪರೀಕ್ಷೆಗೆ ಓದುವಂತೆ ಪಾಲಕರು ಬುದ್ಧಿ
ಹೇಳಿದ್ದಕ್ಕೆ ಎಸ್ಎಸ್ಎಲ್ಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸದಾಶಿವ ನಗರದ ಸೂರಜ್ ಕಳ್ಳಿಗುದ್ದಿ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ಕರೊನಾ ಸೋಂಕು ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಿದ ನಂತರ ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿತ್ತು. ಮನೆಯಲ್ಲೇ ಇದ್ದ ವಿದ್ಯಾರ್ಥಿ ವಿಡಿಯೋ ಗೇಮ್ನಲ್ಲಿ ತಲ್ಲೀನನಾಗಿದ್ದ. ಅಲ್ಲದೆ ಬಡಾವಣೆಯ ಗೆಳೆಯರೊಂದಿಗೆ ಕಾಲ ಕಳೆಯುತ್ತಿದ್ದ. ಇದನ್ನು ಗಮನಿಸಿದ ಪಾಲಕರು ಸಮಯ ವ್ಯರ್ಥ ಮಾಡದೆ ಈ ಅವಧಿಯಲ್ಲೆ ಹೆಚ್ಚಿನ ಅಧ್ಯಯನ ಮಾಡಿ ಪರೀಕ್ಷೆಗೆ ಸಿದ್ಧವಾಗುವಂತೆ ಸೂಚಿಸಿದ್ದರು.
ಇದರಿಂದ ಮನನೊಂದ ಸೂರಜ್ ಶನಿವಾರ ರಾತ್ರಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.