ಕೋಲಾರ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಅವರ ಕೊಲೆಯ ನೈಜತೆಯನ್ನು ತಿರುಚುವ ಮೂಲಕ ಕೆಲವರು ದಿಕ್ಕು ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಮೂಲಕ ಸತ್ಯವನ್ನು ಹೊರಗಡೆ ತರಬೇಕಾಗಿದೆ ಎಂದು ಎಂ.ಶ್ರೀನಿವಾಸನ್ ಪತ್ನಿ ಡಾ.ಚಂದ್ರಕಲಾ ಸೆರಗೊಡ್ಡಿ ಅಂಗಲಾಚಿದರು.
ಶ್ರೀನಿವಾಸಪುರ ಪಟ್ಟಣದಲ್ಲಿ ಶನಿವಾರ ವಿವಿಧ ಧರ್ಮಗುರುಗಳು ಹಾಗೂ ಸಂಘ ಸಂಸ್ಥೆಗಳ ಸಾಮೂಹಿಕ ನೇತೃತ್ವದಲ್ಲಿ ಏರ್ಪಡಿಸಿದ್ದ ಜಿಪಂ ಮಾಜಿ ಅಧ್ಯಕ್ಷ ದಿ. ಎಂ.ಶ್ರೀನಿವಾಸನ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ನಡೆಯುವ ಕೊಲೆ ಪ್ರಕರಣಗಳಿಗೆ ಅಂತ್ಯ ಹಾಡಬೇಕಾಗಿದೆ. ಕೊಲೆಯ ಹಿಂದಿರುವ ಸಂಚುಕೋರರನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣ ನನ್ನ ಮತ್ತು ನಮ್ಮ ಕುಟುಂಬದ ಪ್ರಶ್ನೆಯಲ್ಲ. ತಾಲೂಕಿನ ಸ್ವಾಭಿಮಾನಿಗಳ ಪ್ರಶ್ನೆಯಾಗಿದೆ. ನ್ಯಾಯ ಪಡೆಯಲು ಸಿಬಿಐನಿಂದ ಮಾತ್ರ ಸಾಧ್ಯ. ನ್ಯಾಯದ ಪರವಾದ ಬದುಕಿಗೆ ಜೀವ ತನ್ನಿ ಎಂದು ಮನವಿ ಮಾಡಿದರು.
ಶ್ರೀನಿವಾಸಪುರ ತಾಲೂಕಿನಲ್ಲಿ ನಾನು ವೈದ್ಯೆಯಾಗಿ ನನ್ನ ಕೈಯಿಂದಲೇ ಎಷ್ಟೋ ಜೀವಗಳನ್ನು ಉಳಿಸಿದ್ದೇನೆ. ಆದರೆ, ನನ್ನ ಗಂಡನನ್ನು ಈ ರೀತಿಯಲ್ಲಿ ನೋಡುತ್ತೇನೆ ಎಂದು ಕನಸಿನಲ್ಲೂ ನಿರೀಕ್ಷಿಸಿರಲಿಲ.್ಲ ಕೆಲವರು ಸುಳ್ಳು ಹೇಳಿಕೆಗಳನ್ನು ಈಗಾಗಲೆ ಕೊಟ್ಟಿದ್ದಾರೆ. ಹೆಣ್ಣಿನ ಶಕ್ತಿಯೇ ನ್ಯಾಯದ ಶಕ್ತಿಯಾಗಿದ್ದು, ಕೊಲೆಯ ಹಿಂದಿನ ಸಂಚುಕೋರರನ್ನು ಪತ್ತೆ ಹಚ್ಚಬೇಕು ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ತಿಳಿಸಿದರು.
ಜಗದ್ಗುರು ಛಲವಾದಿ ಮಹಾಗುರುಪೀಠ ಚಿತ್ರದುರ್ಗದ ಶ್ರೀ ಬಸವನಾಗಿದೇವ ಶರಣರು ಮಾತನಾಡಿ, 2024ರ ಪ್ರಾರಂಭದಲ್ಲಿ ಸಂಭ್ರಮ ಪಡುವುದು ಬಿಟ್ಟು ಶ್ರದ್ಧಾಂಜಲಿ ಮಾಡಬೇಕಾದ ಪರಿಸ್ಥಿತಿ ನಮ್ಮ ಮುಂದೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೊಲೆಗಾರರಿಗೆ ಕಾನೂನು ಮೂಲಕ ಶಿಕ್ಷೆಯಾಗುವಂತೆ ಮಾಡಬೇಕು. ಜತೆಗೆ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಅವರಿಗೆ ಶಿಕ್ಷೆಯಾದರೆ ಮಾತ್ರವೇ ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಅವರಿಗೆ ಚಿರಶಾಂತಿ ದೊರೆಯಲು ಸಾಧ್ಯ ಎಂದರು.
ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಮಾತನಾಡಿ, ಇಂತಹ ಕೊಲೆ ಟನೆಗಳು ಮರು ಕಳಿಸಬಾರದು, ಇದು ಇಲ್ಲಿಗೆ ಅಂತ್ಯವಾಗಬೇಕು,ಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಕೊಲೆ ಆರೋಪಿಗಳಿಗೆ ಶಿೆಯಾಗುವ ತನಕ ಕುಟುಂಬಸ್ಥರ ಹಾಗೂ ಸ್ವಾಮಿಜಿಗಳ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಮುಖಂಡ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿದರು.
ಅಲ್ಲಮಪ್ರಭು ಮಹಾಸಂಸ್ಥಾನ ಕಲ್ಕೆರೆ ಮಠದ ತಿಪ್ಪೇರುದ್ದ ಸ್ವಾಮಿ, ತುರುವೇಕೆರೆಯ ಸಿದ್ದರಾಮ ಚೈತನ್ಯ ಸ್ವಾಮೀಜಿ, ರಿಪಬ್ಲಿಕ್ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಮಾವು ಮಂಡಳಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಜಿಪಂ ಮಾಜಿ ಸದಸ್ಯರಾದ ಎಸ್.ಬಿ.ಮುನಿವೆಂಕಟಪ್ಪ, ಮ್ಯಾಕಲ ನಾರಾಯಣಸ್ವಾಮಿ, ಡಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಾಪಂ ಮಾಜಿ ಸದಸ್ಯ ಕೆ.ಕೆ ಮಂಜುನಾಥ್, ಬಿ.ಜಿ.ಸೈಯದ್ ಖಾದರ್, ಶರ್ೀ, ಭಾಸ್ಕರ್, ವಿ.ಶಂಕರ್ ಮುಂತಾದವರು ಇದ್ದರು.