ಶ್ರೀನಗರ: ಮಹಾಶಿವರಾತ್ರಿ ಹಬ್ಬವನ್ನು ಕಾಶ್ಮೀರದಲ್ಲಿ ಹೈರಾತ್ ಎಂದು ಕರೆಯಲಾಗುತ್ತದೆ. ಕಾಶ್ಮೀರಿ ಪಂಡಿತರು ಈ ಹಬ್ಬವನ್ನು ದೇಶದ ಉಳಿದ ಭಾಗಗಳಲ್ಲಿ ಆಚರಿಸುವ ಒಂದು ದಿನದ ಮೊದಲು ಆಚರಿಸುತ್ತಿದ್ದರು.
ಈ ಬಾರಿ ಫೆ.21ರಂದು ಮಹಾಶಿವರಾತ್ರಿ ಹಬ್ಬ ಇದೆ. ಅಂದರೆ ಕಾಶ್ಮೀರದ ಹಿಂದುಗಳಿಗೆ ಇವತ್ತೇ ಹಬ್ಬ. ಒಂದು ಕಾಲದಲ್ಲಿ ಅಲ್ಲಿ ಸಂಭ್ರಮದಿಂದ ಶಿವರಾತ್ರಿ ಆಚರಿಸುತ್ತಿದ್ದ ಕಾಶ್ಮೀರಿ ಪಂಡಿತರು ಈಗಿಲ್ಲ.
ಶ್ರೀನಗರ ಮೇಯರ್ ಜುನೈದ್ ಅಜೀಮ್ ಮಾಟ್ಟು ಅವರು ಶಿವರಾತ್ರಿಯ ಈ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.
ಕಾಶ್ಮೀರಿ ಪಂಡಿತ್ ಸಹೋದರ, ಸಹೋದರಿಯರ ಕೆಚ್ಚೆದೆಯ ಹೋರಾಟವನ್ನು ಈ ಹೈರಾತ್ ಹಬ್ಬದಂದು ನೆನಪಿಸಿಕೊಳ್ಳಬೇಕು. ನಾವೆಲ್ಲರೂ ನಿಮ್ಮೊಂದಿಗೆ ನಿಲ್ಲುತ್ತೇವೆ, ನಿಮ್ಮ ಕಷ್ಟಕ್ಕೆ ಜತೆಯಾಗುತ್ತೇವೆ ಎಂದು ಅವರಿಗೆ ಹೇಳಬೇಕು ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ನೀವಿಲ್ಲದೆ ಕಾಶ್ಮೀರ ಅಪರಿಪೂರ್ಣವಾಗಿದೆ. ನೀವೆಲ್ಲ ಗೌರವಯುತವಾಗಿಯೇ ಹಿಂದಿರುಗುತ್ತೀರಿ ಎಂಬ ನಂಬಿಕೆಯಿಂದ ಕಾಯುತ್ತಿದ್ದೇವೆ ಎಂದು ಮೆಯರ್ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಮಾಟ್ಟು ಅವರು ಜಮ್ಮು-ಕಾಶ್ಮೀರ ಪೀಪಲ್ ಕಾನ್ಫರೆನ್ಸ್ನ ಹಿರಿಯ ವಕ್ತಾರರೂ ಹೌದು.
ಕಾಶ್ಮೀರ ಪಂಡಿತರ ಹೋರಾಟ ಕಥನ ಎಲ್ಲರಿಗೂ ಗೊತ್ತು. ಕಾಶ್ಮೀರದಲ್ಲಿನ ಉಗ್ರವಾದದಿಂದ ಅವರು ಪಟ್ಟ ಚಿತ್ರ ಹಿಂಸೆ ಅಷ್ಟಿಷ್ಟಲ್ಲ. ಕೊಡಬಾರದ ಕಷ್ಟ ಕೊಟ್ಟು ಕಾಶ್ಮೀರದಿಂದ ಹೊರಹಾಕಲಾಯಿತು. ಚಿತ್ರಹಿಂಸೆ ತಾಳಲಾರದೆ 1989-90ರ ಸಮಯದಲ್ಲಿ ಸುಮಾರು ಏಳು ಲಕ್ಷ ಕಾಶ್ಮೀರಿ ಪಂಡಿತರು ಅಲ್ಲಿಂದ ಹೊರಗೆ ಬಂದಿದ್ದಾರೆ. (ಏಜೆನ್ಸೀಸ್)