ಶ್ರೀಮಂಗಲ: ಹೋಬಳಿ ವ್ಯಾಪ್ತಿಯ ನಾಲ್ಕೇರಿ ಸುತ್ತಮುತ್ತ ಪ್ರವಾಹಕ್ಕೆ ಸಿಲುಕುವ ಪ್ರದೇಶಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಕ್ಷಮಾ ಮಿಶ್ರಾ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು.
ಲಕ್ಷ್ಮಣತೀರ್ಥ ನದಿಗೆ ಟಿ.ಶೆಟ್ಟಿಗೇರಿ ನಾಲ್ಕೇರಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕೆಳಭಾಗದಲ್ಲಿ ಸರಿಯಾಗಿ ನೀರು ಹರಿಯದೆ ಇರುವುದು ಪ್ರವಾಹಕ್ಕೆ ಕಾರಣವಾಗುತ್ತಿದೆ. ಇಲ್ಲಿ ಶೇಖರಣೆಗೊಂಡಿರುವ ಮಣ್ಣನ್ನು ತೆರವುಗೊಳಿಸಿದರೆ ಪ್ರವಾಹವನ್ನು ತಗ್ಗಿಸಬಹುದು ಎಂದು ಸ್ಥಳೀಯ ಚೆಟ್ಟಂಗಡ ರವಿ ಸುಬ್ಬಯ್ಯ ಜಿಲ್ಲಾಧಿಕಾರಿಗೆ ವಿವರಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಸೇತುವೆಯನ್ನು ಖುದ್ದು ಪರಿಶೀಲಿಸಿ ಕಿರು ನೀರಾವರಿ ಯೋಜನೆ ಇಲಾಖೆಯ ಮುಖಾಂತರ ಈ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಅತಿವೃಷ್ಟಿಯ ಸಮಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಂದಾಯ ಅಧಿಕಾರಿಗಳು, ಎನ್ಡಿಆರ್ಎಫ್ ಹಾಗೂ ಪೊಲೀಸರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ರೆವಿನ್ಯೂ ಇನ್ಸ್ಪೆಕ್ಟರ್ ಸುಧೀಂದ್ರ, ಸಿಪಿಐ ಪರಶಿವ ಮೂರ್ತಿ ಇತರರು ಇದ್ದರು.