ಬೆಂಗಳೂರು: ಶ್ರೀರಾಮ ಎಲ್ಲರಿಗೂ ಶ್ರೀರಾಮ. ಬಿಜೆಪಿಯವರು ಎಲ್ಲದರೂ ಖರೀದಿಸಿದ್ದಾರೆಯೇ. ಶ್ರೀರಾಮ ಈ ದೇಶದ ಸಂಸ್ಕೃತಿ, ಪರಂಪರೆಯ ಆಸ್ತಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ, ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಭಾನುವಾರ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಡಾ. ಜಿ. ಪರಮೇಶ್ವರ ಅವರು, ಆಯೋಧ್ಯದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಬಳಿಕ ರಾಮನ ಹೆಸರು ಟಾರ್ಗೆಟ್ ಆಗುತ್ತಿದೆ ಎಂದು ಬಿಜೆಪಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿದರು.
ನಾವು ಪದೇ ಪದೆ ಹೇಳುತ್ತಿದ್ದೇವೆ. ಶ್ರೀರಾಮ ಎಲ್ಲರಿಗೂ ಶ್ರೀರಾಮ. ಬಿಜೆಪಿ ಅವರು ಎಲ್ಲದರೂ ಖರೀದಿಸಿದ್ದಾರೆಯೇ. ಅದಕ್ಕೆ ಎಷ್ಟು ಹಣ ಆಯ್ತೋ ನಮಗೆ ಗೊತ್ತಿಲ್ಲ.
ಬಿಜೆಪಿಯವರಿಗೆ ದುಡ್ಡು ಕೊಟ್ಟು ಕೊಂಡುಕೊಳ್ಳೋ ಅಭ್ಯಾಸ ಇದೆ. ಹೀಗಾಗಿ ಶ್ರೀರಾಮನನ್ನ ಕೊಂಡು ಕೊಂಡಿದ್ದರೆಯೇ ನನಗೆ ಗೊತ್ತಿಲ್ಲ. ನಾನು ಸಣ್ಣವನಿದ್ದಾಗ ಶ್ರೀರಾಮ ನವಮಿ ದಿನ ಪಾನಕ, ಕೋಸಂಬರಿ, ಮಜ್ಜಿಗೆ ಹಂಚಿದ್ದೇನೆ. ನಮಗೆ ಅಂತಹ ರಾಮ ಬೇಕು. ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ. ಈ ದೇಶದ ಸಂಸ್ಕೃತಿ, ಪರಂಪರೆಯ ಆಸ್ತಿ ಎಂದು ಗೃಹ ಸಚಿವರು ತಿಳಿಸಿದರು.